ಕೊಪ್ಪಳ: ‘ಪ್ರತಿಯೊಬ್ಬರು ಸೇವಾ ಮನೋಭಾವನೆ ರೂಢಿಸಿಕೊಳ್ಳಬೇಕು. ನಮ್ಮ ಬದುಕು ಮತ್ತು ವೃತ್ತಿಯ ಜೊತೆಗೆ ಸೇವಾ ಮನೋಭಾವನೆ ಬಹಳ ಮುಖ್ಯ’ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಮೈತ್ರಾದೇವಿ ಪಿ. ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಿರಿಯ ರೆಡ್ಕ್ರಾಸ್ ಸಂಯೋಜಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ಶಾಲಾ ಹಂತದಲ್ಲಿರುವ ವಿದ್ಯಾರ್ಥಿಗಳಲ್ಲಿ ಓದಿನ ಜೊತೆಗೆ ಸೇವಾಮನೋಭಾವನೆ ಬೆಳೆಸಬೇಕಾಗಿದೆ. ಹೀಗಾಗಿ, ಶಾಲೆಯಲ್ಲಿ ಕಾರ್ಯನಿರ್ವಹಿಸುವ ಕಿರಿಯ ರೆಡ್ ಕ್ರಾಸ್ ಸಂಯೋಜಕರು ಈ ದಿಸೆಯಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಮಹತ್ವದ್ದಾಗಿದೆ’ ಎಂದರು.
ಆರ್.ಟಿ. ಓ. ಲಕ್ಷ್ಮೀಕಾಂತ ನಾಲ್ವಾಡ ‘ಕೇವಲ ನಮ್ಮ ಬದುಕು ಕಟ್ಟಿಕೊಳ್ಳುವುದು ಬದುಕು ಅಲ್ಲ, ಇನ್ನೊಬ್ಬರ ಬದುಕಿಗೆ ಹಾಗೂ ಸಮಾಜಕ್ಕೆ ಆಸರೆಯಾದಾಗಲೇ ಬದುಕು ಸಾರ್ಥಕ’ ಎಂದರು.
ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಹ್ಯಾಟಿ, ನಿರ್ದೇಶಕರಾದ ಶಿವನಗೌಡ ಪಾಟೀಲ್, ರವಿಕುಮಾರ ದಾಣಿ, ಸಂಪನ್ಮೂಲ ವ್ಯಕ್ತಿಗಳಾದ ಆನಂದ ಡಿ. ಗೌಡ, ಪ್ರವೀಣ ಬಿ. ಹಿರೇಮಠ, ಸುಚಿತ ಸುರ್ವಣ ಇದ್ದರು. ದೇವೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಇಂದು: ಕಾರ್ಯಾಗಾರದ ಸಮಾರೋಪ ಶನಿವಾರ ಮಧ್ಯಾಹ್ನ 4 ಗಂಟೆಗೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ನೆರವೇರಿಸುವರು.