ಕೊಪ್ಪಳ: ‘ನಿರುದ್ಯೋಗಿ ಯುವಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಗಾಗ ನಡೆಯುವ ಉದ್ಯೋಗ ಮೇಳಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು.
ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಡೆದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ‘ಖಾಸಗಿ ಕಂಪನಿಗಳು ಯುವಜನರಿಗೆ ಉದ್ಯೋಗದ ಅವಕಾಶ ನೀಡುತ್ತಿವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ ಮಾತನಾಡಿ ‘ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದಿಂದ ಉದ್ಯೋಗಾಕಾಂಕ್ಷಿಗಳ ಅಭಿಲಾಷೆಗಳು ಬದಲಾವಣೆ ಆಗಿದ್ದರಿಂದ ಅದಕ್ಕೆ ತಕ್ಕಂತೆ ಮೇಳಗಳು ನಡೆಯುತ್ತಿವೆ. ಯುವಜನತೆ ಜಾಗೃತರಾಗಬೇಕು’ ಎಂದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಡಾ.ಪ್ರಭುರಾಜ ನಾಯಕ್, ಕಾಲೇಜಿನ ಸಿಬ್ಬಂದಿ, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಪ್ರಾಣೇಶ್, ಕೇಂದ್ರದ ಪ್ರಥಮ ದರ್ಜೆ ಸಹಾಯಕ ಮಹೇಶ್, ಕಾಲೇಜಿನ ಸ್ಥಾನೀಕರಣ ಕೋಶದ ಸಂಚಾಲಕ ಶಿವನಾಥ ಪಾಲ್ಗೊಂಡಿದ್ದರು. 300ಕ್ಕೂ ಅಧಿಕ ಉದ್ಯೋಗದ ಆಕಾಂಕ್ಷಿಗಳು ಪಾಲ್ಗೊಂಡಿದ್ದರು.