ಗಂಗಾವತಿ: ಇಲ್ಲಿನ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಭಾರತೀಯ ವೈದ್ಯಕೀಯ ಸಂಘ ಸಹಯೋಗದಲ್ಲಿ ಬೇಸಿಕ್ ಲೈಫ್ ಸಪೋರ್ಟ್ ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಜರುಗಿತು.
ಸಂಪನ್ಮೂಲ ವ್ಯಕ್ತಿ ಡಾ.ಸತೀಶ ರಾಯ್ಕರ್ ಮಾತನಾಡಿ, ಇತ್ತಿಚೇಗೆ ಹದಿಹರೆಯದ ವಯಸ್ಸಿನ ಯುವಕರಲ್ಲಿ ಹೃದಯಘಾತ, ಹೃದಯ ಸಮಸ್ಯೆ, ಹೃದಯ ಸ್ತಂಭನದಂತಹ ಘಟನೆಗಳಿಂದ ದಿಢೀರ್ ಆಗಿ ಸಾವನ್ನಪ್ಪುತ್ತಿದ್ದು, ಯುವಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಇನ್ನೂ ಹೃದಯಘಾತವಾದ ಸಂದರ್ಭದಲ್ಲಿ ಸಿಪಿಆರ್ (ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ) ವಿಧಾನದ ಮೂಲಕ ಹೃದಯಘಾತವಾದ ವ್ಯಕ್ತಿಯ ಎದೆಯ ಮಧ್ಯಭಾಗದ ಮೇಲೆ ಇನ್ನೊಂದು ಕೈಯನ್ನಿಟ್ಟು ಸಾಕಷ್ಟು ಕ್ಷಿಪ್ರಲಯದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ಒತ್ತಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ವೀಣಾ ಸತೀಶ ವಿದ್ಯಾರ್ಥಿಗಳಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸಿದರೆ, ಡಾ.ಸುಲೋಚನಾ ಚಿನಿವಾಲರ ಸ್ವಾಮಿ ವಿವೇಕಾನಂದರ ಆದರ್ಶ ತತ್ವ, ಮಹಿಳಾ ಸಬಲೀಕರಣ ಬಗ್ಗೆ ಮಾತನಾಡಿದರು.