ಕೊಪ್ಪಳ: ಮನುಷ್ಯರು ಕೃತಕವಾಗಿ ಸೃಷ್ಟಿಸಲಾರದಂತಹ ವಸ್ತು ಎಂದರೆ ಅದು ರಕ್ತ ಮಾತ್ರ ರಕ್ತವನ್ನು ದಾನ ಮಾಡುವುದರ ಮೂಲಕ ಮನುಷ್ಯ ಮನುಷ್ಯನ ಜೀವ ಉಳಿಸಿಬೇಕು ಎಂದು ರಾಬಿತೆ ಮಿಲ್ಲತ್ ಜಿಲ್ಲಾಧ್ಯಕ್ಷ ಲಾಯಖ್ ಅಲಿ ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹಾಗೂ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಯಾವುದೇ ಜಾತಿಭೇದವಿಲ್ಲದೆ ರಕ್ತದಾನ ಮಾಡಬೇಕು. ಒಬ್ಬರು ರಕ್ತದಾನ ಮಾಡುವುದರ ಮೂಲಕ ಮೂರು ಜನರ ಪ್ರಾಣವನ್ನು ಉಳಿಸಬಹುದು. ಆರೋಗ್ಯವಂತ ಮನುಷ್ಯನ ದೇಹದಲ್ಲಿ ರಕ್ತ ಆರು ಲೀಟರ್ವರೆಗೂ ಇರುತ್ತದೆ. ಅದರಲ್ಲಿ ಒಂದು ಸಾರಿ ರಕ್ತದಾನ ಮಾಡಿದರೆ ಕೇವಲ 350ಯೂನಿಟ್ ರಕ್ತ ಮಾತ್ರ ಮಾಡುತ್ತಾನೆ. ಹಾಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡಬಹುದು ಎಂದರು.
10ರಿಂದ 55 ಬಾರಿ ರಕ್ತದಾನ ಮಾಡಿದ ಯುವಕರನ್ನು ನೋಡಿ ಆಶ್ಚರ್ಯವಾಗುತ್ತದೆ. ಇವರು ಬೇರೆಯವರಿಗೆ ಪ್ರೇರಣೆ ಆಗುತ್ತಾರೆ. ಇವರನ್ನು ನೋಡಿ ಎಲ್ಲರೂ ರಕ್ತದಾನ ಮಾಡಬೇಕು. ಹೆಚ್ಚಿನ ಬಾರಿ ರಕ್ತದಾನ ಮಾಡಿದವರ ಫೋಟೊ ಮತ್ತು ಯಾರು ಎಷ್ಟು ಬಾರಿ ರಕ್ತದಾನ ಮಾಡಿದ್ದಾರೆ ಎಂದು ಅವರ ವಿವರ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಬರೆದು ಹಾಕಬೇಕು. ಅದು ಬೇರೆಯವರಿಗೆ ಪ್ರೇರಣೆಯಾಗಬಹುದು ಎಂದರು.
ರೆಡ್ಕ್ರಾಸ್ ಸಂಸ್ಥೆ ಕೊಪ್ಪಳ ಘಟಕದ ಉಪಸಭಾಪತಿ ಡಾ.ಚಂದ್ರಶೇಖರ್ ಕರಮುಡಿ ಮಾತನಾಡಿ, ರೆಡ್ ಕ್ರಾಸ್ ಘಟಕ ರೋಗಿಗಳಿಗೆ ಉಚಿತವಾಗಿ ರಕ್ತದಾನ ಮಾಡುತ್ತಿದೆ. ರಾಜ್ಯಮಟ್ಟದ ಪ್ರಶಸ್ತಿ ಪಡೆದಿದೆ. ಆರೋಗ್ಯವಂತರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಡಾ.ಶ್ರೀನಿವಾಸ, ಚೌತಾಯಿ ವಕೀಲರು ಮಾತನಾಡಿದರು. ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿಮುದ್ದಿನ್, ಪಾರ್ಟಿಯ ವಲಯ ಸಂಚಾಲಕ ರಾಜ ನಾಯ್ಕ, ಎಚ್.ಆರ್.ಎಸ್ನ ಘಟಕದ ಅಧ್ಯಕ್ಷ ಮೊಮ್ಮದ್ ಖಲೀಲ್ ಉಡೆವು, ಕರ್ನಾಟಕ ರಕ್ತದಾನಿಗಳ ಬಳಗದ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ವಾಹಿದ್, ಪತ್ರಕರ್ತರಾದ ಸಂತೋಷ ದೇಶಪಾಡೆ, ಸೋಮರಡ್ಡಿ ಅಳವಂಡಿ, ಜಕರಿಯಾ ಖಾನ್, ರಿಯಾಜ್ ಅಹ್ಮದ್, ಫಾಹದ್ ಹುಸೇನ್, ರಹಮತ್ ಹುಸೇನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.