ಕನಕಗಿರಿ: ಸಮೀಪದ ನವಲಿ ಗ್ರಾಮದ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ₹1 ಕೋಟಿ ಸಾಲ ನೀಡುವಂತೆ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ ಅವರು ಒತ್ತಾಯಿಸಿದ್ದಾರೆ.
ರಾಯಚೂರು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಅವರನ್ನು ಭಾನುವಾರ ಭೇಟಿಯಾಗಿ ಈ ಮನವಿ ಸಲ್ಲಿಸಿದ್ದಾರೆ.
ಹಿಂಗಾರು ಬೆಳೆ ಬೆಳೆಯಲು ಹಾಗೂ ಹಳೆಯ ಸಾಲಗಾರರಿಗೆ ಹೆಚ್ಚುವರಿ ಸಾಲ ನೀಡಲು ಸಂಘಕ್ಕೆ ಸಾಲದ ಅವಶ್ಯಕತೆ ಇದೆ. ಕಳೆದ ಹತ್ತು ವರ್ಷಗಳಿಂದಲೂ ಒಬ್ಬ ರೈತರಿಗೆ ಬರೀ ₹30 ಸಾವಿರ ಕೃಷಿ ಸಾಲ ನೀಡಲಾಗಿದೆ. ಸ್ಕೇಲ್ ಆಫ್ ಫೈನಾನ್ಸ್ ಪ್ರಕಾರ ಹೆಚ್ಚುವರಿ ಸಾಲದ ಅವಶ್ಯಕತೆ ಇದೆ" ಎಂದು ಮನವಿಯಲ್ಲಿ ಗಮನ ಸೆಳೆದಿದ್ದಾರೆ.
ಸಂಘದ ಉಪಾಧ್ಯಕ್ಷ ಚಂದ್ರಪ್ಪ ಹಿರೇಕುರುಬರ, ಜಡಿಯಪ್ಪ ಆದಾಪುರ, ನಿಂಗಪ್ಪ ನಾಯಕ, ಶಂಕರಗೌಡ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗೇಶ ಗುಂಡದ ಇದ್ದರು.