ಕಾರಟಗಿ: ರಾಜ್ಯದಲ್ಲಿ ಜನರು ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ. ಈಗ ಕಾಂಗ್ರೆಸ್ ವಿರೋಧ ಪಕ್ಷವಾಗಿ ಉಳಿಯಲು ಸಾಧ್ಯವಿಲ್ಲ. ಅದು ಸಹ ಮುಂದಿನ ದಿನಗಳಲ್ಲಿ ಒಂದು ಪ್ರಾದೇಶಿಕ ಪಕ್ಷವಾಗಿ ಉಳಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಗೆ ರಾಯಚೂರು-ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಇವರ ಪರ ಪ್ರಚಾರದ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಬೇಡ ಎಂದು ಜನ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗ ನಡೆಯುತ್ತಿರುವ ಪರಿಷತ್ ಚುನಾವಣೆಯಲ್ಲಿ 15 ರಿಂದ 16 ಕಡೆ ನಮ್ಮ ಅಭ್ಯರ್ಥಿಗಳೇ ಗೆಲ್ಲೋದು. ಗ್ರಾಮ ಪಂಚಾಯಿತಿಯ ಸದಸ್ಯರು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಪಿಡಿಒಗಳಿಗೂ ತರಬೇತಿ ನೀಡಲಾಗುತ್ತದೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಗೆಲ್ಲೋದು ಸುಲಭ. ಆದರೆ, ವಿಧಾನ ಪರಿಷತ್ ಚುನಾವಣೆ ಕಷ್ಟ. ಇದರಲ್ಲಿ ಗ್ರಾ.ಪಂ. ಸದಸ್ಯರ ಪಾತ್ರ ಮುಖ್ಯ ನಿಮ್ಮ ಪ್ರಯತ್ನ ನಮಗೆ ಗೆಲುವಾಗಬೇಕು ಎಂದರು.
ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿ, ಗ್ರಾ.ಪಂ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ವಿಶ್ವನಾಥ ಅವರನ್ನು ಪರಿಷತ್ಗೆ ಕಳುಹಿಸಿ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್, ಹಿಂದುಳಿದ ವರ್ಗದ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಸೋಮಶೇ ಖಗೌಡ, ಚಂದ್ರುಗೌಡ ಯರಡೋಣಾ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ನವೀನ್ ಗುಳಗಣ್ಣನವರ್, ಉಮೇಶ ಸಜ್ಜನ್, ಮೋಹನರಾವ್, ಗುರುಸಿದ್ದಪ್ಪ ಯರಕಲ್, ಶರಣೇಗೌಡ ಇದ್ದರು.
‘ಈಗಲೇ ಸಿಎಂ ಬದಲಾವಣೆ ಇಲ್ಲ’:
‘ಮುಂದಿನ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದೆ ಹೊರತು ಈಗಲೇ ಅಲ್ಲ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
‘ಮುರುಗೇಶ ನಿರಾಣಿ ಮುಖ್ಯಮಂತ್ರಿ ಆಗುವರೆಂದು ಬೀಳಗಿಯಲ್ಲಿ ಹೇಳಿದ್ದೇನೆ. ಆದರೆ, ನಾಳೆಯೇ ಆಗುತ್ತಾರೆ ಎಂದು ಹೇಳಿಲ್ಲ. ಮುಂದಿನ ಚುನಾವಣೆಯಲ್ಲಿ ಆಗುತ್ತಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಪರಿಶಿಷ್ಟರನ್ನು ಉದ್ದಾರ ಮಾಡಿದ್ದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಅವರು ಎಂದಿಗೂ ಪರಿಶಿಷ್ಟರ ಉದ್ಧಾರ ಮಾಡುವುದಿಲ್ಲ. ಉದ್ಧಾರ ಮಾಡಿದ್ದರೆ, ವರುಣಾದಿಂದ ಬಾದಾಮಿ ಕ್ಷೇತ್ರಕ್ಕೆ ಯಾಕೆ ಬರುತ್ತಿದ್ದರು? ಈಗ ಅಲ್ಲಿಯೂ ಜನ ಸೋಲಿಸುವರು ಎಂಬ ಭಯದಿಂದ ಬೇರೆ ಕ್ಷೇತ್ರದತ್ತ ನೋಡುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.