ಹೊಸ ಬಂಡಿಹರ್ಲಾಪುರ (ಮುನಿರಾಬಾದ್): ‘ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ’ ಎಂದು ಮುನಿರಾಬಾದ್ ಪೊಲೀಸ್ ಠಾಣಾಧಿಕಾರಿ ಸುಪ್ರೀತ್ ಪಾಟೀಲ ಅಭಿಪ್ರಾಯಪಟ್ಟರು.
ಸಮೀಪದ ಹೊಸ ಬಂಡಿಹರ್ಲಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು’ ಉಚಿತ ಆನ್ಲೈನ್ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ಸಂಖ್ಯೆ ಏರುಗತಿಯಲ್ಲಿರುವುದು ಆಶಾದಾಯಕ ಬೆಳವಣಿಗೆ. ಪರೀಕ್ಷೆ ತಯಾರಿಗೆ ಉತ್ತಮ ತರಬೇತಿ, ಸಂಪನ್ಮೂಲ, ಒಳ್ಳೆಯ ಪುಸ್ತಕಗಳು ದೊರೆಯುತ್ತಿವೆ. ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಿ’ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ನಿಂಗಪ್ಪ ಕಂಬಳಿ ಮಾತನಾಡಿ,‘ಮಾನಸಿಕ ದ್ವಂದ್ವಗಳನ್ನು ನಿವಾರಿಸಿಕೊಂಡು ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಪರೀಕ್ಷೆಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ, ಪರಿಣಿತರ ಮಾರ್ಗದರ್ಶನ ಪಡೆದು ಯಶಸ್ಸಿಗೆ ಪೂರಕವಾಗಬಲ್ಲ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಪರಿಶ್ರಮ ಪಟ್ಟು ಓದುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದರು.
ಐದು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ವೀರೇಶ ಬಡಿಗೇರ್-ಇತಿಹಾಸ, ಶಂಕರ ಬಿರಾದಾರ-ಭೂಗೋಳಶಾಸ್ತ್ರ, ಡಾ. ಪಾಂಡುರಂಗ-ಅರ್ಥಶಾಸ್ತ್ರ, ಈಶ್ವರ ಗಿರಿ-ಮಾನಸಿಕ ಸಾಮರ್ಥ್ಯ, ಶರಣು ಬಾಗೂರು-ರಾಜ್ಯಶಾಸ್ತ್ರ, ವೆಂಕಟೇಶ-ಸಾಮಾನ್ಯ ವಿಜ್ಞಾನ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.
ರಾಜು, ಅನುರಾಧ, ವೆಂಕೋಬ ಮತ್ತು ತಾಯಪ್ಪ ಅನುಭವ ಹಂಚಿಕೊಂಡರು. ಸಹಾಯಕ ಪ್ರಾಧ್ಯಾಪಕರಾದ ಸಂತೋಷ ಕಾಡಪ್ಪನವರ, ವೀರೇಂದ್ರ ಪಾಟೀಲ, ರಾಮಣ್ಣ ಉಪ್ಪಾರ ಈ ವೇಳೆ ಹಾಜರಿದ್ದರು.
ಜಗದೀಶ ಹೊಸಹಳ್ಳಿ ಸ್ವಾಗತಿಸಿದರು ಹಾಗೂ ಅನ್ನಪೂರ್ಣ ಪಂತರ್ ವಂದಿಸಿದರು.