ಕನಕಗಿರಿ: ಕೊರೊನಾ ಲಾಕ್ಡೌನ್ಗೆ ಮೊದಲ ದಿನವಾದ ಸೋಮವಾರ ಪಟ್ಟಣದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಪೊಲೀಸ್ ಇಲಾಖೆ ಸಿಬ್ಬಂದಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದರು.
ವಾಲ್ಮೀಕಿ ವೃತ್ತ, ರಾಜಬೀದಿ ಒಳಗೊಂಡಂತೆ ವಿವಿಧ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಸಾಲದು ಎಂಬಂತೆ ವಾಹನಗಳನ್ನು ವಶಕ್ಕೆ ಪಡೆದು, ಸವಾರರಿಗೆ ದಂಡ ವಿಧಿಸಿದರು.
ನಸುಕಿನಿಂದಲೇ ವಾಹನದಲ್ಲಿ ಸಂಚರಿಸಿದ ಪಿಎಸ್ಐ ತಾರಾಬಾಯಿ ಪವಾರ, ಸಹಾಯಕ ಸಬ್ ಇನ್ಸ್ಪೆಕ್ಟರ್ ಜಾಫರದ್ದೀನ್ ಅವರು ಸರ್ಕಾರ ನಿಗದಿಪಡಿಸಿದ ಸಮಯಕ್ಕೆ ಅಂಗಡಿ ಬಂದ್ ಮಾಡಬೇಕು ಎಂದು ಸೂಚಿಸಿದರು.
ಮಧ್ಯಾಹ್ನ ಪಟ್ಟಣದ ಪ್ರಮುಖ ರಸ್ತೆಗಳು, ಬಸ್ ನಿಲ್ದಾಣ, ನೀರ್ಲೂಟಿ ರಸ್ತೆ, ಗಂಗಾವತಿ-ಲಿಂಗಸುಗೂರು ರಸ್ತೆ ಬಿಕೋ ಎನ್ನುತ್ತಿರುವುದು ಕಂಡುಬಂತು.
ಅಗತ್ಯ ವಸ್ತು ಖರೀದಿಸಲು ಅವಕಾಶ ನೀಡಿದ್ದರೂ ಜನ ಅಂತರ ಕಾಪಾಡಿಕೊಳ್ಳದೆ ಗುಂಪಾಗಿ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕೆಲ ಕಡೆ ಕಂಡು ಬಂತು.