ಲಿಂಗದಹಳ್ಳಿ (ತಾವರಗೇರಾ): ‘ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಹೊರಗಡೆ ಹೋಗಬೇಕು. ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬೇಡಿ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಸಮೀಪದ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಈಚೆಗೆ ಭೇಟಿ ನೀಡಿ ನಂತರ ಕೊರೊನಾ ಜಾಗೃತಿ ಮೂಡಿಸಿ ಮಾತನಾಡಿದರು.
ಕೊರೊನಾ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು, ಗ್ರಾಮೀಣ ಪ್ರದೇಶದ ಜನರು ಸಹ ಆರೋಗ್ಯ ದೃಷ್ಟಿಯಿಂದ ಅನಗತ್ಯವಾಗಿ ತಿರುಗಾಡ ಬಾರದು. ನೆಗಡಿ, ಜ್ವರ, ಕೆಮ್ಮು ಸೇರಿ ಇನ್ನಿತರ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಂಡು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊರೊನಾ ಜಾಗೃತಿ ಜಾಥಾ ಸಾಗಿತು.
ಲಿಂಗದಹಳ್ಳಿ ಪಿಡಿಒ ಮಲ್ಲಿಕಾರ್ಜುನ ಮಳ್ಳಿಮಠ, ಗ್ರಾ.ಪಂ. ಅಧ್ಯಕ್ಷೆ ಮೈತ್ರಾ ಹುನಗುಂದ, ಉಪಾಧ್ಯಕ್ಷ ಪಂಪಣ್ಣ ಪೂಜಾರಿ, ಕಿರಿಯ ಆರೋಗ್ಯ ಸಹಾಯಕಿ ಸೌಭಾಗ್ಯಶ್ರೀ, ಗ್ರಾ.ಪಂ. ಸದಸ್ಯರಾದ ದೇವರಾಜ ಮ್ಯಾದನೇರಿ, ಚೌಡಪ್ಪ ಹುನಗುಂದ ಹಾಗೂ ಲಿಂಗರಾಜ ಇದ್ದರು.
ಕಾರ್ಯದರ್ಶಿ ಹನಮಂತರಾಯ ಕಾಟಿಗಲ್ ಅವರು ಕಾರ್ಯಕ್ರಮ ನಿರೂಪಿಸಿದರು.