ಕೊಪ್ಪಳ: ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಗಂಗಾವತಿಯ 7ನೇ ವಾರ್ಡ್ನ ಮೆಹಿಬೂಬ್ ನಗರದ ನಿವಾಸಿ ರಾಜಾಸಾಬ್ (25) ಮೃತ ಯುವಕ.
ಘಟನೆಯ ವಿವರ: ಸ್ನೇಹಿತರ ಜತೆ ಭಾನುವಾರ ಸ್ನಾನಕ್ಕೆ ಹೋಗಿದ್ದ ಯುವಕ ಆಳವಾದ ನೀರಿನ ಗುಂಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.
ಸೋಮವಾರ ಬೆಳಿಗ್ಗೆ ಶವ ಪತ್ತೆಯಾಗಿದೆ. ಇನ್ನೊಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಯಾಸದಿಂದ ಈಜಿ ದಡ ಸೇರಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿ ಮತ್ತು ಸಹೋದರಿಯರ ಆಂಕ್ರದನ ಮುಗಿಲು ಮುಟ್ಟಿತ್ತು.
ಗ್ರಾಮಸ್ಥರ ಆಕ್ರೋಶ: ‘ಇಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು, ಬೇಕಾಬಿಟ್ಟಿಯಾಗಿ ಗುಂಡಿಗಳನ್ನು ತೋಡಿ ಬಿಡುವುದರಿಂದ ಪ್ರತಿವರ್ಷ ಹತ್ತಾರು ಜನರು ಬಲಿಯಾಗುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರುತ್ತಾರೆ.
‘ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.