ಕೊಪ್ಪಳ: ಇಲ್ಲಿನ ಎಸ್.ಜಿ.ಕಾಲೇಜಿನ ಇತಿಹಾಸ ವಿಭಾಗದಿಂದ ಶುಕ್ರವಾರ ‘ಟಾಕ್ ವಿತ್ ಟಾಪರ್’ ಕಾರ್ಯಕ್ರಮ ಆಯೋಜಿಸಲಾಗಿತ್ತು.
2018-19 ಸಾಲಿನಲ್ಲಿ ಕಾಲೇಜಿನ ಬಿ.ಎ ವಿಭಾಗದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ 5ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಗೌರಮ್ಮ ಕುಂಬಾರ ಅವರನ್ನು ಆಮಂತ್ರಿಸಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಅಧ್ಯಯನ ವಿಧಾನ, ಅಧ್ಯಯನ ಪರಿಕರಗಳು, ಬರವಣಿಗೆ, ನಾಗರಿಕ ಸೇವಾ ಪರೀಕ್ಷೆಗಳ ತಯಾರಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿ ಗೌರಮ್ಮ ಕುಂಬಾರ ಅವರಿಂದ ಉತ್ತರ ಪಡೆದರು. ಸಂವಾದದ ಬಳಿಕ ಗೌರಮ್ಮ ಕುಂಬಾರ ಅವರನ್ನು ಗೌರವಿಸಲಾಯಿತು.
ಈ ವೇಳೆ ಇತಿಹಾಸ ವಿಭಾಗದ ಮುಖ್ಯಸ್ಥ ರಾಜು ಹೊಸಮನಿ, ಕಾಲೇಜಿನ ಪ್ರಾಚಾರ್ಯ ಡಾ.ಚನ್ನಬಸವ ಮತ್ತಿತರರು ಇದ್ದರು.