ಕೊಪ್ಪಳ: ಜಿಲ್ಲೆಯ ಕಾರಟಗಿ ರೈಲು ನಿಲ್ದಾಣದ ಸಮೀಪದಲ್ಲಿ ಯಶವಂತಪುರ–ಕಾರಟಗಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ ಕಾರಣ ಮಂಗಳವಾರ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದು ಮಾಡಿದೆ.
ಬೆಳಿಗ್ಗೆ 9 ಗಂಟೆಗೆ ಹುಬ್ಬಳ್ಳಿಯಿಂದ ಹೊರಟ ರೈಲು ಮಧ್ಯಾಹ್ನ 1.25ಕ್ಕೆ ಕಾರಟಗಿ ತಲುಪಿಬೇಕಿತ್ತು. ಎಂಜಿನ್ ಹಳಿ ತಪ್ಪಿದ್ದರಿಂದ ಇದನ್ನು ಗಂಗಾವತಿಗೆ ಮೊಟಕುಗೊಳಿಸಲಾಯಿತು. ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಕಾರಟಗಿಗೆ ಹೋಗಬೇಕಾದ ರೈಲು ವೇಳಾಪಟ್ಟಿಯನ್ನು ಭಾಗಶಃ ರದ್ದುಪಡಿಸಲಾಗಿದ್ದು, ಇದು ಕಾರಟಗಿ ಬದಲು ಗಂಗಾವತಿ ತನಕ ಮಾತ್ರ ತೆರಳಲಿದೆ.
ಕಾರಟಗಿಯಿಂದ ಹುಬ್ಬಳ್ಳಿಗೆ ತೆರಳಬೇಕಿದ್ದ ರೈಲಿನ ಸಂಚಾರ ಗಂಗಾವತಿಯಿಂದ ಆರಂಭಿಸಲಾಗುತ್ತದೆ. ಸಂಜೆ 5.30ಕ್ಕೆ ಕಾರಟಗಿ–ಯಶವಂತಪುರ ಎಕ್ಸ್ಪ್ರೆಸ್ ರೈಲಿನ ಸಂಚಾರ ಕಾರಟಗಿ ಬದಲು ಗಂಗಾವತಿಯಿಂದ ಆರಂಭವಾಗಲಿದೆ.
‘ಎಂಜಿನ್ ಹಳಿ ತಪ್ಪಿರುವ ಕಾರಣ ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಯಾಣಿಕರ ಅನುಕೂಲಕ್ಕೆ ಕಾರಟಗಿ ರೈಲು ನಿಲ್ದಾಣದಿಂದ ಗಂಗಾವತಿ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.