ಕೊಪ್ಪಳ: ‘ಜಗತ್ತಿನ ತಾಪಮಾನ ಕಡಿಮೆ ಮಾಡಲು ಪರಿಸರ ಸಂರಕ್ಷಣೆ ಅಗತ್ಯ. ಉದ್ಯೋಗ ಸೃಷ್ಠಿಯಾಗಬೇಕಾದರೆ ಕೈಗಾರಿಕೆಗಳು ಬೇಕು. ಹಾಗೆಯೇ ಕೈಗಾರಿಕೆಗಳ ಮಾಲಿನ್ಯ ನಿಯಂತ್ರಿಸಲು ಪರಿಸರ ಅಗತ್ಯವಾಗಿದೆ. ಗಿಡಮರಗಳನ್ನು ಬೆಳೆಸುವುದರಿಂದ ನೈರ್ಮಲ್ಯ ವಾತಾವರಣ ಸೃಷ್ಟಿಸಬಹುದು’ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಹೇಳಿದರು.
ನಗರದ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರಾದೇಶಿಕ ಕಚೇರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಹಾಗೂ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಆಹಾರ ಶುದ್ಧೀಕರಿಸಬಹುದು, ಆದರೆ ಗಾಳಿಯನ್ನು ಶುದ್ಧೀಕರಿಸಲು ಅಸಾಧ್ಯ. ಶುದ್ಧವಾದ ಗಾಳಿ ಪಡೆಯಲು ಪರಿಸರ ಅಗತ್ಯವಾಗಿದೆ. ಪರಿಸರ ದಿನಾಚರಣೆಯು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ ಪರಿಸರವನ್ನು ಸಂರಕ್ಷಿಸುವುದರ ಮೂಲಕ, ಗಿಡ ನೆಡುವ ಮೂಲಕ ಆಚರಿಸಬೇಕು. ಪ್ರತಿದಿನವೂ ಪರಿಸರ ಸಂರಕ್ಷಣೆಯ ದಿನವಾಗಬೇಕು. ವಿದ್ಯಾರ್ಥಿಗಳು ಗಿಡ ನೆಡುವ ಪಣ ತೊಡಬೇಕು’ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್ ಮಾತನಾಡಿ ‘ಮನುಷ್ಯನಿಗೆ ಪರಿಸರ ಅನಿವಾರ್ಯ, ಪರಿಸರಕ್ಕೆ ಮನುಷ್ಯ ಅಗತ್ಯವಿಲ್ಲ. ಪರಿಸರವನ್ನು ಸಂರಕ್ಷಿಸಲು ಹಲವಾರು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುಂದರ ಮೇಟಿ, ಕೊಪ್ಪಳದ ಪ್ರಾದೇಶಿಕ ಅಧಿಕಾರಿ ಎಸ್.ಸಿ. ಸುರೇಶ, ಡಾ. ನಾಗರಾಜ ದಂಡೋತಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರೇತರ ಸದಸ್ಯ ಡಾ.ಬಸವರಾಜ ಪೂಜಾರ, ಡಾ. ಶಶಿಕಾಂತ ಉಮ್ಮಾಪುರೆ, ವಿನೋದ ಮುದಿಬಸನಗೌಡರ, ಶರಣಪ್ಪ ಚವ್ಹಾಣ, ಮಹೇಶ ಬಿರಾದಾರ, ಅರುಣಕುಮಾರ ಎ.ಜಿ, ಶ್ರೀದೇವಿ, ರಾಜು ಹೊಸಮನಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.