ಗಂಗಾವತಿ: ತಾಲ್ಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಬೇಕು. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ದರದಲ್ಲಿ ಭತ್ತ ಖರೀದಿಸುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು, ರೈತರು ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಂಘಟನೆಯ ಅಧ್ಯಕ್ಷ ಕೇಸರಹಟ್ಟಿ ಶರಣಗೌಡ ಪಾಟೀಲ ಮಾತನಾಡಿ,‘ಕೂಡಲೇ ತಾಲ್ಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಹೆಚ್ಚುವರಿಯಾಗಿ ಪ್ರತಿ ಚೀಲಕ್ಕೆ ಎರಡು ಕೆ.ಜಿ ತೂಕ ಹೆಚ್ಚಿಸಬೇಕು ಮತ್ತು ದಲ್ಲಾಳಿ ಹಾಗೂ ಹಮಾಲಿ ಶುಲ್ಕವನ್ನು ರೈತರ ಮೇಲೆ ಹೇರುವ ಖರೀದಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಶಾಸಕರಿಗೆ ಮನವಿ ಮಾಡಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ,‘ಭತ್ತ ಕಟಾವು ಆರಂಭವಾಗಿದೆ. ಬೆಲೆ ಇಲ್ಲದ ಕಾರಣ ರೈತರು ಕೃಷಿ ಉತ್ಪನ್ನ ಮಾರಾಟ ಮಾಡಲು ಆಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ರೈತರ ಸಮಸ್ಯೆಗಳ ಕುರಿತು ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಕೂಡಲೇ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು.
ಸಂಘಟನೆಯ ಪ್ರಮುಖರಾದ ಸಂಗಮೇಶ, ಗೋಸ್ಲಪ್ಪ, ಅಬ್ದುಲ್ ಸಾಬ್, ಮಹಾಂತೇಶ, ಎಚ್.ನಿರುಪಾದಿ, ಬಸವರಾಜ ಮಾದಿನಾಳ, ದೇವರಾಜ ನಾಯಕ ಹಾಗೂ ಶರಣಪ್ಪ ಇದ್ದರು.