ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಬಹಂಚಿನಾಳ: ಮಾರುತೇಶ್ವರ ಕಾರ್ತಿಕೋತ್ಸವ ಇಂದು

ಪಾದಯಾತ್ರೆ ಬಂದು ಲಕ್ಷ ದೀಪೋತ್ಸವ ಆಚರಿಸುವ ಭಕ್ತರು
Last Updated 29 ನವೆಂಬರ್ 2021, 7:44 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನವು ಈ ಭಾಗದ ಅಪಾರ ಸಂಖ್ಯೆ ಭಕ್ತರ ನೆಚ್ಚಿನ, ಪುಣ್ಯ ತಾಣವಾಗಿದೆ. ಇದು ಪುರಾತನ ದೇವಸ್ಥಾನವಾಗಿದ್ದು, ಸುಂದರ ಕೆತ್ತನೆ ಕಲಾಕೃತಿಗಳನ್ನು ಹೊಂದಿದೆ. ಇಲ್ಲಿನ ಮೂರ್ತಿ ಪ್ರತಿಷ್ಠಾಪನೆ ಐತಿಹಾಸಿಕ ಚರಿತ್ರೆ ಹೊಂದಿದೆ.

‘ಇಟಗಿಗೆ ತೆಗೆದುಕೊಂಡು ಹೋಗುತ್ತಿದ್ದ ಹನುಮಂತನ ಮೂರ್ತಿಯನ್ನು ಕತ್ತಲು ಆದ ಕಾರಣ ಮಸಬಹಂಚಿನಾಳ ಗ್ರಾಮದ ಹೊರವಲಯದಲ್ಲಿ ಇರಿಸಿ ವಸತಿ ಮಾಡಲಾಯಿತು. ಮರು ದಿನ ಇಟಗಿಗೆ ತೆಗೆದುಕೊಂಡು ಹೋಗಲು ಎತ್ತಿದಾಗ ಮೂರ್ತಿಯು ಆ ಸ್ಥಳದಿಂದ ಮೇಲಕ್ಕೆ, ಮುಂದಕ್ಕೆ ಸರಿಯಲಿಲ್ಲ. ಅಂದಿನಿಂದ ಆ ಮೂರ್ತಿಯನ್ನು ಇಲ್ಲಿಯೇ ಪೂಜೆ ಮಾಡಲಾಗುತ್ತಿದೆ’ ಎಂದು ಊರಿನ ಹಿರಿಯರು ಹೇಳುತ್ತಾರೆ.

ವಾಸ್ತವವಾಗಿ ಹನುಮಂತನ ಮೂರ್ತಿ ದಕ್ಷಿಣಾಭಿಮುಖವಾಗಿ ಇರುತ್ತವೆ. ಆದರೆ, ಇಲ್ಲಿನ ವೈಶಿಷ್ಟ್ಯವೆಂದರೆ ಮೂರ್ತಿಯು ಪಶ್ಚಿಮಾಭಿಮುಖವಾಗಿ ಇದೆ. ಆದ್ದರಿಂದಲೇ ಶನಿವಾರ ಮತ್ತು ಪ್ರತಿ ಅಮಾವಾಸ್ಯೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಅವರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿರುತ್ತದೆ. ಭಕ್ತರು ಅಂದು ರಾತ್ರಿ ಇಲ್ಲಿಯೇ ಮಲಗಿ ಮರುದಿನ ಬೆಳಿಗ್ಗೆ ಮಜ್ಜಲ ಭಾವಿಯಲ್ಲಿ ಸ್ನಾನ ಮಾಡಿ ಬಂದು ದೇವರ ದರ್ಶನ ಪಡೆಯುತ್ತಾರೆ. ಇದರಿಂದ ಅವರ ಅನೇಕ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಗ್ರಾಮಸ್ಥರು ದೇವಸ್ಥಾನದ ಗೋಪುರಕ್ಕಿಂತ ಎತ್ತರಕ್ಕೆ ಮನೆಕಟ್ಟುವುದಿಲ್ಲ.

ಕಾರ್ತಿಕ ಮಾಸದಲ್ಲಿ ಈ ಭಾಗದಲ್ಲಿ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ಜಾತ್ರೆ ನಂತರ ಉಳಿದ ದೇವರ ಕಾರ್ತಿಕಗಳು ಜರಗುತ್ತವೆ. ಕಾರ್ತಿಕ ಮಾಸದ ನವೆಂಬರ್ 29ರಂದು ಮಾರುತೇಶ್ವರ ಜಾತ್ರೆ ನಡೆಯುತ್ತದೆ. ಕುಂಕುಮಾರ್ಚನೆ, ಎಲೆಪೂಜೆ, ದಾಸೋಹ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಪಾದಯಾತ್ರೆ ಮುಖಾಂತರ ಹಲವಾರು ಭಕ್ತರು ಸುತ್ತಮುತ್ತಲಿನ ಗ್ರಾಮದಿಂದ ಬಂದು ಲಕ್ಷ ದೀಪೋತ್ಸವ ಆಚರಿಸುವರು. ಇಟಗಿ ಮಹೇಶ್ವರ ಭಜನಾ ಸಂಘ, ಮಂಡಲಗಿರಿ ವೀರೇಶ್ವರ ಭಜನಾ ಸಂಘದವರಿಂದ ಕಾರ್ಯಕ್ರಮ ಜರುಗುತ್ತದೆ.

ನ.30ರ ಮಂಗಳವಾರ ಬೆಳಿಗ್ಗೆ 4ಕ್ಕೆ ವಿವಿಧ ಗ್ರಾಮದ ಸುಮಾರು ಐದು ಭಜನಾಮಂಡಳಿಗಳಿಂದ ಪಲ್ಲಕ್ಕಿ ಸೇವೆ, ಮುಂಗೈಕುಸ್ತಿ, ಕಬ್ಬಡ್ಡಿ, ರಂಗೋಲಿ, ಹಾಡಿನ ಸ್ಪರ್ಧೆ ಜರುಗುತ್ತವೆ. ಕಾರ್ತಿಕೋತ್ಸವದಲ್ಲಿ ಗ್ರಾಮದ ಸಕಲ ಹಿರಿಯರು, ಅಧ್ಯಕ್ಷರು, ಸರ್ವಸದಸ್ಯರು, ಯುವಕರು ಭಾಗವಹಿಸುವರು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಹೇಳುತ್ತಾರೆ.

ಬೇಡಿದ ಭಕ್ತರು ದೇವಸ್ಥಾನಕ್ಕೆ ಹಣ ಮತ್ತು ವಸ್ತುಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಯುಗಾದಿ ಪಾಡ್ಯೆಯ ದಿನ ಹುಬ್ಬಳ್ಳಿ, ದಾವಣಗೆರೆ, ಗದಗ, ಬಳ್ಳಾರಿ, ರೋಣ ಹೀಗೆ ಮುಂತಾದ ನಗರಗಳಿಂದ ಭಕ್ತರು ಆಗಮಿಸುವರು. ಅಂದಿನ ರಾತ್ರಿ ಲಘು ರಥೋತ್ಸವ, ಖೊಂಡ ಹಾರುವ ಕಾರ್ಯಕ್ರಮ ನಡೆಯುವುದು.

ಈಗ ದೇವಸ್ಥಾನ ಜೀರ್ಣೋದ್ಧಾರ ನಡೆಯುತ್ತಿದೆ. ದೇವಸ್ಥಾನದ ಕಾರ್ಯಾಲಯದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಪುಸ್ತಕಗಳನ್ನು ಓದುಗರಿಗೆ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT