ಯಲಬುರ್ಗಾ: ದೇಶದಲ್ಲಿ ಜಾತಿ, ಧರ್ಮ, ದೇವರು ಹೆಸರಿನಲ್ಲಿ ಹೊಡೆದಾಡಿಕೊಂಡು ಮೃತರಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ಜಾತಿ ಎನ್ನುವುದು ದೇಶ ನಾಶ ಮಾಡುವ ಒಂದು ಪಿಡುಗಾಗಿದೆ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ವಿಷಾದಿಸಿದರು.
ಮರಕಟ್ಟ ಗ್ರಾಮದಲ್ಲಿ ಶುಕ್ರವಾರ ಶಿವಯ್ಯ ಸ್ವಾಮೀಜಿ ಅವರ 8ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ 99ನೇ ಮಾಸಿಕ ಶಿವಾನುಭವ ಕಾರ್ಯಕ್ರಮ, ಗ್ರಾಮದ ಬಸವಕೇಂದ್ರ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಣಿಗಳಂತೆ ವಾಸಿಸುತ್ತಿದ್ದ ಮನುಷ್ಯ, ಮೊದಲು ಯಾವುದೇ ಜಾತಿಯನ್ನು ಮಾಡಿಕೊಂಡಿರಲಿಲ್ಲ. ತಿಳುವಳಿಕೆ ಬಂದಾಗಲೆಲ್ಲಾ ವಿವಿಧ ಧಾರ್ಮಿಕ ಪದ್ಧತಿ, ಮೂಢನಂಬಿಕೆ, ಜಾತಿ ಎಂದು ಸೃಷ್ಟಿಸಿಕೊಂಡು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟರು.
ರಾಜೇಶ ಸಸಿಮಠ ಮಾತನಾಡಿ, ಮಾದರಿ ವ್ಯಕ್ತಿಯ ವ್ಯಕ್ತಿತ್ವವನ್ನು ನಾವೇಲ್ಲರೂ ಅನುಸರಿಸುವ ಮೂಲಕ ಸುಂದರ ಸಮಾಜವನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯಿದೆ. ಶರಣ ತತ್ವವು ಎಲ್ಲರೂ ಸಮಾನರು ಎಂದು ಹೇಳುತ್ತದೆ. ಶರಣರನ್ನು ಸ್ಮರಿಸುವ ನಾವುಗಳು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ಶಂಕ್ರಪ್ಪ ಅಂಗಡಿ, ಬಸವಾದಿ ಶರಣರ ವಚನಗಳನ್ನು ಮತ್ತು ಆರೂಢರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಪುಟ್ಟ ಮರಕಟ್ಟ ಗ್ರಾಮದ ಶಿವಾನಂದ ಮಠದಲ್ಲಿ ನಿರಂತರವಾಗಿ ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.