ಆನೆಗುಂದಿ (ಗಂಗಾವತಿ): ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವೇಳೆ ಸ್ನೇಹಿತರು ನೀಡಿದ ಧೈರ್ಯ, ನೆರವು ಮತ್ತು ತೋರಿದ ಕಾಳಜಿ, ಅಭಿಮಾನ ಮರೆಯಲಾಗದು ಎಂದು ಆನೆಗುಂದಿಯ ವಿದ್ಯಾರ್ಥಿ ವಿಜಯಕುಮಾರ್ ಹೇಳುತ್ತಾರೆ.
'ಕೊರೊನಾ ಪಾಸಿಟಿವ್ ಎಂದು ಗೊತ್ತಾದಾಗ, ಮನದಲ್ಲಿ ಜೀವ ಭಯವಿತ್ತು. ಕುಟುಂಬ ಸದಸ್ಯರಿಗೂ ಹರಡುವ ಭೀತಿ ಕಾಡಿತು. ಮನೆಯಲ್ಲಿ ಕ್ವಾರಂಟೈನ್ ಆಗಿ ಉಳಿದರೂ ಭೀತಿ ಕಾಡುತ್ತಲೇ ಇತ್ತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಸ್ನೇಹಿತರು ನೆರವಿಗೆ ಧಾವಿಸಿದರು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಸ್ನೇಹಿತರಾದ ರಾಮಾಂಜನೇಯ ಮತ್ತು ರಾಮು ನೀಡಿದ ಧೈರ್ಯ, ಆತ್ಮವಿಶ್ವಾಸವು ವಿಜಯಕುಮಾರ್ ಅವರೊಳಗಿನ ನನ್ನೊಳಗಿನ ಭಯ ನಿವಾರಿಸಿತು. ಸ್ನೇಹಿತರು ನಿತ್ಯ ಮನೆಗೆ ಬಂದು ಆರೋಗ್ಯ ವಿಚಾರಿಸಿ, ದಿನಸಿ ಕೂಡ ನೀಡಿದರು.
ಸ್ವಂತ ಹಣದಿಂದ ಹಣ್ಣು, ಬ್ರೆಡ್, ಬಿಸ್ಕಟ್, ಹಾಲು, ಚಾಕಲೇಟ್ ಹಾಗೂ ಔಷಧಿಗಳನ್ನು ಖರೀದಿಸಿ ನೀಡಿದರು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತರಕಾರಿ ಆಹಾರ ತಯಾರಿಸಿ, ಮನೆಗೆ ತಂದುಕೊಟ್ಟರು. ಮನೆ ಖರ್ಚಿಗಾಗಿ ಸ್ನೇಹಿತರೆಲ್ಲರೂ ಸೇರಿ ಹಣ ಸಂಗ್ರಹಿಸಿ ನೀಡಿದರು. ವೈದ್ಯರನ್ನು ಕರೆ ತಂದು ತಪಾಸಣೆ ಮಾಡಿಸಿದರು.
‘ಕೊರೊನಾದಿಂದ ಗುಣಮುಖವಾಗಲು ನಿತ್ಯ ಬಿಸಿ ಪದಾರ್ಥ ಮತ್ತು ಶುಂಠಿ ಟೀ, ಬಿಸಿ ನೀರು ಕುಡಿಯುತ್ತಿದ್ದೆ. ವೈದ್ಯರ ಸಲಹೆಯಂತೆ ನಿತ್ಯ ಕಾರ್ಯಗಳು ಕೈಗೊಳ್ಳುತ್ತಿದ್ದೆ. ಇವೆಲ್ಲವೂ ಗುಣಮುಖನಾಗಲು ಸಹಕಾರಿಯಾದವು. ಈ ಸಂದರ್ಭದಲ್ಲಿ ಸ್ನೇಹಿತರ ನೆರವು, ಕಾಳಜಿ ಮರೆಯಲಾಗದು’ ಎಂದು ವಿಜಕುಮಾರ್ ಹೇಳುತ್ತಾರೆ.