ಕೊಪ್ಪಳ: ನಗರದ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಶನಿವಾರ ಜಾತ್ರಾ ಮಹೋತ್ಸವದ ಅಂಗವಾಗಿ 'ಕೊಪ್ಪಳ ವೃಕ್ಷಾಸ್ಥಾನ' (ಮ್ಯಾರಾಥಾನ್) 2020 ನಡೆಯಿತು.
ಸ್ಪರ್ಧೆಯಲ್ಲಿ ಒಟ್ಟು 1100 ಕ್ರೀಡಾಪಟುಗಳು ಭಾಗವಹಿಸಿದ್ದರು. 700 ಪುರುಷರು,400 ಮಹಿಳಾ ಕ್ರೀಡಾ ಪಟುಗಳು ಭಾಗವಹಿಸಿದ್ದು, ವಿಶೇಷವಾಗಿತ್ತು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಥ್ಲೆಟಿಕ್ ಅಸೋಶಿಯನ್ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮತ್ತು ಗವಿಸಿದ್ದಪ್ಪ ಕರಡಿ, ಅಮ್ಜದ್ ಪಟೇಲ, ಜಿಲ್ಲಾ ಪಂಚಾಯಿತಿ ಸದಸ್ಯ ಗೂಳಪ್ಪ ಹಲಗೇರಿ, ಶ್ರೀನಿವಾಸ ಗುಪ್ತಾ, ರಾಮಣ್ಣ ಹದ್ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮ್ಯಾರಾಥಾನ್ ಸ್ಪರ್ಧೆ ಮಠದ ಆವರಣದಿಂದ ಆರಂಭವಾಗಿ ಗದಗ ರಸ್ತೆಯ ಮೂಲಕ ಮಳೆಮಲ್ಲೇಶ್ವರ ದೇವಸ್ಥಾನದವರೆಗೆ ನಡೆಯಿತು.
ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಸುನಿಲ್ ಎಂ.ಡಿ (ಪ್ರಥಮ), ಗದಗನ ಮಂಜುನಾಥ ದೇಸಾಯಿ (ದ್ವಿತೀಯ), ಹುಬ್ಬಳ್ಳಿಯ ನಾಗರಾಜ ವಿ.ಡಿ (ತೃತೀಯ), ಬೆಂಗಳೂರಿನ ಆಸೀಸ್ ಪಟೇಲ (ನಾಲ್ಕನೇ), ಹುಬ್ಬಳ್ಳಿಯ ಲಕ್ಷ್ಮಣ್ಣ ಲಮಾನಿ (ಐದನೇ), ಬೆಂಗಳೂರಿನ ನರಸಿಂಗ ಪಟೇಲ್ (ಆರನೇ) ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಹುಬ್ಬಳ್ಳಿಯ ಶಾಯಿನ್ ಎಸ್.ಡಿ (ಪ್ರಥಮ), ಕೊಪ್ಪಳದ ಹಿಟ್ನಾಳ್ನ ನಾಗವೇಣಿ ಶಿವಪುತ್ರಪ್ಪ (ದ್ವಿತೀಯ),ವಿಜಯಪುರದ ಮಹೇಶ್ವರಿ ರಾಠೋಡ (ತೃತೀಯ), ಗದಗಿನ ಮೇಘನಾ ಕೆ.(ನಾಲ್ಕನೇ), ಕೊಪ್ಪಳದ ಕ್ರೀಡಾ ವಸತಿ ಶಾಲೆಯ ಸಾನಿಯಾ (ಐದನೇ) ಸ್ಥಾನ ಪಡೆದಿದ್ದಾರೆ.
ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಸೋಶಿಯೇಷನ್ ಕಾರ್ಯದರ್ಶಿ ಶರಣಬಸವ ಬಂಡಿಹಾಳ, ಶಿವಾನಂದ ಹೊಸಮನಿ, ವೀರಭದ್ರಯ್ಯ ಪೂಜಾರ ಹಾಗೂ ಶಿಕ್ಷಕವೃಂದದವರು ಪಾಲ್ಗೊಂಡಿದ್ದರು. ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಉಪಹಾರ, ಕ್ರೀಡಾ ಸಮವಸ್ತ್ರ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.