ಕೊಪ್ಪಳ: ಜನಾರ್ದನ ರೆಡ್ಡಿ ಬಿಜೆಪಿಗಾಗಿ ದುಡಿದಿದ್ದಾರೆ ಎನ್ನುವುದು ನಿಜ. ಆದರೆ, ಅವರು ಹೊಸ ಪಕ್ಷ ಯಾಕೆ ಸ್ಥಾಪನೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಏನೂ ಪರಿಣಾಮ ಬೀರುವುದಿಲ್ಲ. ನಮ್ಮ ಪಕ್ಷ ಎಷ್ಟು ಗಟ್ಟಿಯಿದೆ ಎನ್ನುವುದು ಜಗತ್ತಿಗೆ ಗೊತ್ತಿದೆ. ಇದಕ್ಕೆ ಈ ಸಲದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಸಾಧನೆಯೇ ಸಾಕ್ಷಿ. ಬಹಳಷ್ಟು ವರ್ಷಗಳ ಶ್ರಮದಿಂದ ಬೆಳೆದು ಬಂದ ಪಕ್ಷವಿದು’ ಎಂದರು.
‘ನಮ್ಮ ಪಕ್ಷಕ್ಕಾಗಿ ದುಡಿದವರು ನಮ್ಮಲಿಯೇ ಇರಬೇಕಿತ್ತು ಎನ್ನುವ ಸಹಜ ನಿರೀಕ್ಷೆ ನನಗೂ ಇದೆ. ಪಕ್ಷ ಬಿಟ್ಟು ಬೇರೆ ಪಕ್ಷ ಸ್ಥಾಪನೆ ಮಾಡುವುದಾಗಿ ಹೇಳಿದವರಿಗೆ ಏನು ಹೇಳಬೇಕು’ ಎಂದು ಪ್ರಶ್ನಿಸಿದರು.