ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಆಡಳಿತದ ವತಿಯಿಂದ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಆದರೂ ವಿವಿಧ ಜಿಲ್ಲೆಗಳಿಂದ ಹನುಮ ಮಾಲಾಧಾರಿಗಳು ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಾಲೆ ವಿಸರ್ಜನೆ ಮಾಡಿದರು.
ಜಿಲ್ಲಾಧಿಕಾರಿ ಆದೇಶದಂತೆ ತಾಲ್ಲೂಕು ಆಡಳಿತ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ನಡೆಸಿದರು.
ದೇವಸ್ಥಾನವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಪವನ, ಹೋಮ–ಹವನ, ಪ್ರವಚನ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬಳ್ಳಾರಿ, ಗದಗ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ರಾಯಚೂರು ಹಾಗೂ ಯಾದಗಿರಿ ಸೇರಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರು ಆಗಮಿಸಿದ್ದರು.
16 ಸಿ.ಸಿ ಕ್ಯಾಮೆರಾ ಅಳವಡಿಕೆ : ಮುಂಜಾಗ್ರತಾ ಕ್ರಮವಾಗಿ ಗರ್ಭಗುಡಿ, ದೇವಸ್ಥಾನದ ಆವರಣ ಹಾಗೂ ಮೆಟ್ಟಿಲು ಸೇರಿ ವಿವಿಧೆಡೆ 16 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
10 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು: ಜಿಲ್ಲಾಡಳಿತ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ ನಿಷೇಧಿಸಿತ್ತು. ಆದರೂ ಹೊರ ಜಿಲ್ಲೆಗಳ 10 ಸಾವಿರಕ್ಕೂ ಹೆಚ್ಚು ಭಕ್ತರು ಆಂಜನೇಯಸ್ವಾಮಿಯ ದರ್ಶನ ಪಡೆದರು. ಮಾಲೆ ವಿಸರ್ಜನೆ ಮಾಡಿದರು.
ವಿವಿಧ ಜಿಲ್ಲೆಗಳಿಂದ ರಾತ್ರಿಯೇ ಆಗಮಿಸಿದ್ದ ಭಕ್ತರು ಬೆಟ್ಟದ ಸಮೀಪ ವಿಶಾಂತ್ರಿ ಪಡೆದರು. ಕೆಲಕಾಲ ನೂಕು ನುಗ್ಗಲು ಉಂಟಾಯಿತು. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಕಡಿಮೆಯಾಯಿತು.
ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ಸಂಯೋಜಕ ಪುಂಡಲಿಕ, ಪ್ರಮುಖರಾದ ವಿನಯ ಪಾಟೀಲ, ದೊಡ್ಡಯ್ಯಸ್ವಾಮಿ, ನರಸಿಂಹ ಮೂರ್ತಿ ಹಾಗೂ ತಿಪ್ಪೆಸ್ವಾಮಿ ಇದ್ದರು.