ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಭಕ್ತರು ಹುಲಿಗಿಯಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಬಳಿಕ ದೇವಿಯ ದರ್ಶನ ಪಡೆಯುವುದು ರೂಢಿ. ಈ ಬಾರಿ ಮಳೆ ಕೊರತೆಯಾಗಿದ್ದರಿಂದ ಜಲಾಶಯದಲ್ಲಿ ನೀರು ಕಡಿಮೆ ಪ್ರಮಾಣದಲ್ಲಿದೆ. ನದಿಗೆ ನೀರು ಹರಿಸಿಲ್ಲ. ಹೀಗಾಗಿ ಲಕ್ಷಾಂತರ ಭಕ್ತರು ಅಲ್ಲಲ್ಲಿ ನಿಂತಿದ್ದ ಕೊಳಚೆ ನೀರಿನಲ್ಲಿಯೇ ಪುಣ್ಯಸ್ನಾನ ಮಾಡಿದರು! ಇನ್ನೂ ಕೆಲವರು ಕೊಳಚೆ ನೀರು ದೂರದಿಂದಲೇ ನೋಡಿ ಕಾಲು ಮಾತ್ರ ತೊಳೆದುಕೊಂಡು ದೇವಿಯ ದರ್ಶನ ಪಡೆದರು.
ನದಿಯಲ್ಲಿರುವ ಅಲ್ಪ ನೀರು ಶುಚಿಯಾಗಿಲ್ಲ; ಯಾರೂ ಸ್ನಾನ ಮಾಡಬೇಡಿ ಎಂದು ಹುಲಿಗೆಮ್ಮ ದೇವಸ್ಥಾನ ಸಮಿತಿ ಭಕ್ತರಿಗೆ ಮೊದಲೇ ತಿಳಿ ಹೇಳಿತ್ತು. ನದಿಗೆ ಹೋಗುವ ಮಾರ್ಗದಲ್ಲಿ ಫಲಕವನ್ನೂ ಅಳವಡಿಸಿದ್ದರೂ ಭಕ್ತರು ಮಾತ್ರ ಕೇಳಲಿಲ್ಲ. ನದಿಯಲ್ಲಿ ಯಥೇಚ್ಛವಾಗಿ ಬಿದ್ದಿರುವ ಒಡೆದ ದೇವರ ಫೋಟೊಗಳು, ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯ, ಪೂಜೆ ಸಾಮಗ್ರಿಗಳ ಬುಟ್ಟಿ ಹಾಗೂ ಮರ ಹೀಗೆ ಅನೇಕ ವಸ್ತುಗಳು ನದಿಯಲ್ಲಿ ಬಿದ್ದಿದ್ದವು. ಅವುಗಳನ್ನೇ ಕೆಲವರು ಪಕ್ಕಕ್ಕೆ ಸರಿಸಿ ಸ್ನಾನ ಮಾಡಿದರು. ನೀರಿನ ಕೊರತೆಯಿಂದ ದೇವಸ್ಥಾನ ಸಮಿತಿ ಕುಡಿಯುವ ಸಲುವಾಗಿ ಟ್ಯಾಂಕರ್ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿತು.