ಕೊಪ್ಪಳ: ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ನಮ್ಮ ಹೊಲಕ್ಕೆ ನುಗ್ಗಿ ಅಕ್ರಮವಾಗಿ ಮರಳು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಶಕುಂತಲಮ್ಮ ಬನ್ನಿಕೊಪ್ಪ ಮತ್ತು ನಾಗರತ್ನಮ್ಮ ತಳವಾರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರದ ಎಸ್.ಪಿ. ಕಚೇರಿಗೆ ತೆರಳಿದ ವಾಲ್ಮೀಕಿ ನಾಯಕ ಸಮುದಾಯದ ಧರ್ಮದರ್ಶಿ ರಾಮಣ್ಣ ಕಲ್ಲನವರ ನೇತೃತ್ವದಲ್ಲಿ ತೆರಳಿ ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್ ಅವರಿಗೆ ಮನವಿ ಕೊಟ್ಟರು.
‘ಹೊಲದಲ್ಲಿ ಇರುವ ಮರಳಿನಲ್ಲಿ ಈಗಾಗಲೇ ಅರ್ಧದಷ್ಟು ತೆಗೆದುಕೊಂಡಿದ್ದು, ಎಷ್ಟೇ ಪ್ರಯತ್ನಪಟ್ಟರೂ ಆರೋಪಿಗಳು ಕೇಳುತ್ತಿಲ್ಲ. ಅಲ್ಲದೇ ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಗಟ್ಟಬೇಕು’ ಎಂದು ಆಗ್ರಹಿಸಿದ್ದಾರೆ.
ವಕೀಲ ವೀರಭದ್ರಪ್ಪ ನಾಯಕ, ಮುಖಂಡರಾದ ಚಂದ್ರಶೇಖರ ಬನ್ನಿಕೊಪ್ಪ, ಶಿವಮೂರ್ತಿ ಗುತ್ತೂರ, ಬಸವರಾಜ ಶಹಪೂರ, ಹನುಂತಪ್ಪ ಗುದಗಿ, ವಿರುಪಾಕ್ಷಗೌಡ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಬೆಳವಿನಾಳ, ಚಿನ್ನಪ್ಪ ನಾಯಕ, ಅವಿನಾಳಪ್ಪ ಶಹಾಪೂರ, ರಮೇಶ ಚೌಡಕಿ, ನಿಂಗಪ್ಪ ನಾಯಕ, ವೀರೇಶ ನಾಯಕ, ಸುರೇಶ ಹಲವಾಗಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.