ಗಂಗಾವತಿ: ಹೊರ ಗುತ್ತಿಗೆ ನೌಕರರಿಗೆ ಬಾಕಿ ವೇತನ ಪಾವತಿಸಬೇಕು ಹಾಗೂ ಅವರಿಗೆ ಸೇವಾಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ನೌಕರರ ಸಂಘ ಹಾಗೂ ಎಸ್ಎಫ್ಐ ಸಂಘಟನೆಯ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಹೋರಾಟಗಾರ ನಿತ್ಯಾನಂದ ಸ್ವಾಮಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ, ಅಂಬೇಡ್ಕರ ವಸತಿ ಶಾಲೆಗಳಲ್ಲಿ ಹೊರಸಂಪನ್ಮೂಲ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ವೇತನ ಇಲ್ಲದೇ ಜೀವನ ನಡೆಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೋವಿಡ್ ಸಂಕಷ್ಟದಿಂದ ಹಾಸ್ಟೆಲ್ ಮುಚ್ಚಲಾಗಿದ್ದು, ಆ ತಿಂಗಳುಗಳ ವೇತನವನ್ನು ಸರ್ಕಾರ ನೀಡಿಲ್ಲ. ಆರ್ಥಿಕ ಇಲಾಖೆ ಆದೇಶದಂತೆ ಬಾಕಿಯಿರುವ ವೇತನ ನೀಡಬೇಕು ಎಂಬ ಆದೇಶವಿದ್ದರೂ, ವೇತನ ನೀಡಿರುವುದಿಲ್ಲ. ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಗ್ಯಾನೇಶ ಕಡಗದ, ಶಿವುಕುಮಾರ, ಹನುಮಂತ, ಮುಕ್ಕುಂಪಿ, ದಾವಲಸಾಬ, ಮಂಜುನಾಥ, ರಫೀ ಜಾಹಗೀದಾರ, ಸೋಮನಗೌಡ, ಮಂಜುನಾಥ, ಪಾರ್ವತಮ್ಮ ಹಾಗೂ ನೌಕರರು ಇದ್ದರು.