‘ಬೋಸ್ ವಿಚಾರಗಳನ್ನು ಮೈಗೂಡಿಸಿಕೊಳ್ಳಿ’: ಸಾಹಿತಿ ಡಾ. ಪ್ರವೀಣ ಪಾಟೀಲ

ಕೊಪ್ಪಳ: ಸುಭಾಷಚಂದ್ರ ಬೋಸ್ ಅವರ ಜನ್ಮದಿನ ಆಚರಿಸಿದರಷ್ಟೇ ಸಾಲದು; ಅವರ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಡಾ. ಪ್ರವೀಣ ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಎಐಡಿಎಸ್ಒ ವತಿಯಿಂದ ನಡೆದ ನೇತಾಜಿ ಸುಭಾಷ್ ಚಂದ್ರಬೋಸ್ aವರ 125ನೇ ಜನ್ಮದಿನದ ಸಮಾರೋಪ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ವಿದ್ಯಾರ್ಥಿಗಳು ಹೆಚ್ಚು ವೈಚಾರಿಕವಾಗಿ ಯೋಚಿಸಬೇಕು. ನೇತಾಜಿ ಅವರು ಹೇಳಿದಂತೆಯೇ ಪ್ರತಿಯೊಂದು ಮೂಲೆಯಲ್ಲೂ ನಡೆಯುವ ಅನ್ಯಾಯವನ್ನು ಪ್ರಶ್ನಿಸುವ ಗುಣ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದರು.
ಎಐಡಿವೈಓ ರಾಜ್ಯ ನಾಯಕ ಶರಣು ಗಡ್ಡಿ ಮಾತನಾಡಿ ‘ಬೋಸ್ ಅವರ ವಿಚಾರಗಳು ಯುವಜನತೆಗೆ ಪ್ರೇರಣೆಯ ಕಥನಗಳಾಗಿವೆ. ಸ್ವತಂತ್ರ ಹೋರಾಟದಲ್ಲಿ ರಾಜೀ ರಹಿತ ಹೋರಾಟ ಮಾಡಿದ್ದರು. ತಮ್ಮ ಬಾಲ್ಯದಿಂದಲೂ ಇಡೀ ದೇಶದ ಜನರ ವಿಮುಕ್ತಿಗಾಗಿ, ಶೋಷಣೆಯಿಂದ ಹೋರಾಟ ಮಾಡಿದ್ದರು’ ಎಂದು ಸ್ಮರಿಸಿದರು.
ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯು ನಡೆಸಿದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಈಶ್ವರ ಪಾರ್ಕ್ನಿಂದ ಮೆರವಣಿಗೆ ನಡೆಯಿತು.
ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ನಾಟಕಕಾರ ಲಕ್ಷ್ಮಣ್ ಪೀರ್ಗಾರ್, ಸರ್ವೋದಯ ಐಟಿಐ ಕಾಲೇಜಿನ ಪ್ರಾಚಾರ್ಯ ನಿಂಗಪ್ಪ ಗದ್ದಿಗೇರಿ, ಕಾರ್ಯಕರ್ತರಾದ ಮನೋಜ್, ಭೀಮೇಶ್, ಶಿವಪ್ಪ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.