ಬಿಸಿಯೂಟದ ಸಿಬ್ಬಂದಿಗೆ ಪರಿಹಾರ ಘೋಷಿಸಿ: ಜಿಲ್ಲಾಧಿಕಾರಿಗೆ ಮನವಿ

ಕೊಪ್ಪಳ: ಬಿಸಿಯೂಟದ ಸಿಬ್ಬಂದಿಗೂ ಕೊರೊನಾ ಪರಿಹಾರ ಮತ್ತು ಆಹಾರ ಸಾಮಗ್ರಿ ಕಿಟ್ ನೀಡಬೇಕು ಎಂದು ಬಿಸಿಯೂಟ ತಯಾರಕರ ಒಕ್ಕೂಟದ (ಎಐಟಿಯುಸಿ) ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರನ್ನು, ಕಡಿಮೆ ಕೂಲಿಗೆ ಅಂದರೆ ದಿನವೊಂದಕ್ಕೆ ₹85 ರಂತೆ ತಿಂಗಳಿಗೆ ₹2,600 ನೀಡಿ, ಬಡ ಮಹಿಳೆಯರನ್ನು ಜೀತದಾಳುಗಳಿಗಿಂತ ಕಡೆಯಾಗಿ ದುಡಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಒಕ್ಕೂಟದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ, ದುಡಿಯುವ ವರ್ಗದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡುವಾಗ, ಸರ್ಕಾರ ಕೊಡುವ ಬಿಡಿಗಾಸಿಗೆ, ದಿನ ಪೂರ್ತಿಯಾಗಿ ಧಗಧಗಿಸುವ ಬೆಂಕಿಯ ಒಲೆಯ ಮೇಲೆ, ಮಕ್ಕಳಿಗಾಗಿ ಬಿಸಿ–ಬಿಸಿಯಾದ ಹಾಲು, ಅಡುಗೆ ಸಿದ್ಧಪಡಿಸಿ ಉಣ ಬಡಿಸುವ ಅಡುಗೆಯವರಿಗೆ ಸಹಾಯ ಮಾಡದೇ ಇರುವುದು ದುರಂತ ಎಂದರು.
ಆದ್ದರಿಂದ ಬಿಸಿಯೂಟ ತಯಾರಕರಿಗೆ ₹10 ಸಾವಿರ ಪ್ರೋತ್ಸಾಹಧನ, ಪಡಿತರ ಕಿಟ್, ಎರಡು ತಿಂಗಳದ ವೇತನ, ₹18 ಸಾವಿರ ಕನಿಷ್ಠ ವೇತನ, ಕೊರೊನಾಕ್ಕೆ ಬಲಿಯಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಮಂಗಲಾ ಕೊತಬಾಳ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಮಕ್ಬೂಲ್ ರಾಯಚೂರು, ಪುಷ್ಪಾ ಮೇಸ್ತ್ರೀ, ಬಾಳಮ್ಮ ಕಟ್ಟಿಮನಿ, ಶಿವಮ್ಮ ಶಹಪುರ, ಮರ್ದಾನಬಿ ಕಾತರಕಿ ಹಾಗೂ ಖಾಜಾಬನಿ ತಾಳಿಕೋಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.