ಗಂಗಾವತಿ: ‘ಕನ್ನಡ ಭಾಷೆ, ನೆಲ–ಜಲ ಕನ್ನಡಿಗರ ಸ್ವಾಭಿಮಾನದಿಂದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿತವಾಗಿದೆ. ಕೆಲವರು ಇಲ್ಲಿ ಜಾತಿ ಬಣಗಳನ್ನು ಮಾಡುವ ಮೂಲಕ ಕಸಾಪಕ್ಕೆ ಕಳಂಕ ತಂದಿದ್ದಾರೆ. ಇದನ್ನು ದೂರ ಮಾಡಲು ವೀರಣ್ಣ ನಿಂಗೋಜಿ ಹಾಗೂ ನಾಡೋಜ ಡಾ.ಮಹೇಶ ಜೋಶಿ ಅವರನ್ನು ಗೆಲ್ಲಿಸಬೇಕು ಎಂದು ವಿಜಯನಗರ ವಿಶ್ವವಿದ್ಯಾಲಯ ಆಡಳಿತ ಮಂಡಳಿ ನಿರ್ದೇಶಕ ಶಿವಾನಂದ ಮೇಟಿ ಹಾಗೂ ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಅಜಮೀರ್ ನಂದಾಪೂರ ಹೇಳಿದರು.
ತಾಲ್ಲೂಕಿನ ಮರಳಿ ಹೋಬಳಿಯ ಢಣಾಪೂರ, ಜಂಗಮರಕಲ್ಗುಡಿ ಮತ್ತು ಆಚಾರನರಸಾಪೂರ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದರು.
‘ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಕಸಾಪ ಕಾರ್ಯ ಚಟುವಟಿಕೆ ಏಕವ್ಯಕ್ತಿ ಪ್ರಧಾನವಾಗಿದ್ದು, ಕಸಾಪ ಮೂಲಕ ರಾಜಕೀಯ ಮಾಡಲಾಗುತ್ತಿದೆ. ತಾಲ್ಲೂಕು ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಕಾಟಚಾರಕ್ಕೆ ನಡೆಸಲಾಗುತ್ತಿದೆ. ಸಮ್ಮೇಳನದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಸಂಪ್ರದಾಯ ಕೈ ಬಿಡಲಾಗಿದೆ. ತಮ್ಮ ಹಿಂಬಾಲಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾಹಿತಿಗಳು, ಲೇಖಕರು, ಬರಹಗಾರರನ್ನು ಹಾಗೂ ಕಸಾಪ ಆಜೀವ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗಿದೆ’ ಎಂದರು.
ಕಸಾಪ ಅಜೀವ ಸದಸ್ಯರಾದ ಕೆ.ನಿಂಗಜ್ಜ, ನವಲಿ ರಾಮಮೂರ್ತಿ, ಸಿಂಗನಾಳ ಕುಮಾರಪ್ಪ, ಡಗ್ಗಿ ಹನುಮಂತಪ್ಪ, ಎಂ.ಶರಣಪ್ಪ, ನ್ಯಾಯವಾದಿ ಸುಭಾಸ ತಿಪಶೆಟ್ಟಿ, ಅಯ್ಯಣ್ಣ, ಟೀಕಯ್ಯ, ಹೊನ್ನೂರಪ್ಪ ಹಾಗೂ ವೈ.ಆನಂದರಾವ್ ಇದ್ದರು.