ಯಲಬುರ್ಗಾ: ಗ್ರಾಮೀಣ ಭಾಗದ ಜನರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.
ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಮೂಲಕ ಭೂತಾಯಿಗೆ ಮೊದಲ ಗೌರವ ಸಲ್ಲಿಸಲಾಗುತ್ತದೆ.
ಈ ಹಬ್ಬಕ್ಕೆ ಸ್ಥಳೀಯ ಕುಂಬಾರ ಹಾಗೂ ಬಡಿಗೇರ ಕುಟುಂಬಗಳು ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತವೆ.
ಕಲಾವಿದ ವಿರೂಪಾಕ್ಷಪ್ಪ ಬಡಿಗೇರ ಮಣ್ಣೆತ್ತಿನ ಮೂರ್ತಿಗಳನ್ನು ತಯಾರಿಸಿದ್ದು, ಜೋಡಿ ಎತ್ತುಗಳಿಗೆ ₹20ರಿಂದ 40 ಗೆ ಮಾರಾಟ ಮಾಡಲಾಗುತ್ತದೆ.
ಹಬ್ಬದ ಒಂದು ತಿಂಗಳ ಮುಂಚಿತವಾಗಿಯೇ ಮಣ್ಣನ್ನು ತಂದು ತಯಾರಿಸಿಟ್ಟುಕೊಳ್ಳುವ ಇವರು ಕಳೆದ 20 ವರ್ಷಗಳಿಂದಲೂ ಈ ಕಾಯಕದಲ್ಲಿ ನಿರತರಾಗಿದ್ದಾರೆ.
ನಿರೀಕ್ಷಿಸಿದಷ್ಟು ಲಾಭ ಸಿಗದಿದ್ದರೂ ಪೂರ್ವಜರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಕಲೆ ಮತ್ತು ಕಸುಬು ಕೈಬಿಡಬಾರದೆಂದು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ವಿರೂಪಾಕ್ಷಪ್ಪ ಹೇಳುತ್ತಾರೆ.