ಗಂಗಾವತಿ: ಇಲ್ಲಿನ ಕಿಲ್ಲಾ ಏರಿಯಾದಲ್ಲಿನ ಮಸೀದಿ ಕಮಿಟಿ ರಚನೆ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಈಚೆಗೆ ಗಲಾಟೆ ನಡೆದು, ಸಮಸ್ಯೆ ಪರಿಹರಿಸಿಕೊಳ್ಳಲು ಶನಿವಾರ ನಗರ ಠಾಣೆಗೆ ಆಗಮಿಸಿದ ವೇಳೆ ಮತ್ತೆ ಜಗಳ ಮಾಡಿಕೊಂಡ ಘಟನೆ ಜರುಗಿದೆ.
ಮರ್ಕಾಸ್ ಮಸೀದಿ ಕಮಿಟಿ ರಚನೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಸೀದಿ ಬಳಿ ಶುಕ್ರವಾರ ರಾತ್ರಿ ಗಲಾಟೆ ನಡೆದಿದೆ.ಈ ಬಗ್ಗೆ ದೂರು ನೀಡಲು ಎರಡೂ ಗುಂಪಿನವರು ನಗರಠಾಣೆಗೆ ಆಗಮಿಸಿ, ಮಾತಿಗೆ ಮಾತು ಬೆಳೆದು ಪೊಲೀಸ್ ಸಿಬ್ಬಂದಿ ಎದುರೇ ಮತ್ತೆ ಬಡಿದಾಡಿಕೊಂಡಿದ್ದಾರೆ.
ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಗುಂಪನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಗಲಾಟೆ ನಡೆಸಿದ ವ್ಯಕ್ತಿಗಳನ್ನು ವಶಕ್ಕೆ ಪಡೆದು ರಾಜಿ ಸಂಧಾನ ಮಾಡಲಾಯಿತು. ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.