ಕಾರಟಗಿ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಜೋಕರ್’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.
ಇಲ್ಲಿಯ ಶಿವರಾಜ ತಂಗಡಗಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ರಾಜ್ಯದಲ್ಲಿ ಕೊರೊನೊ ಪ್ರಕರಣ ಹೆಚ್ಚುತ್ತಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ’ ಎಂದರು.
ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಅನ್ನೋದು ಬಿಟ್ಟರೆ, ಅವರೇನೂ ಜನಪ್ರತಿನಿಧಿಯಲ್ಲ. ಅಂಥವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
‘ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ಮಾನಹಾನಿಯಾಗುವಂತ ಯಾವ ಹೇಳಿಕೆಯನ್ನೂ ನಾನು ನೀಡಿಲ್ಲ. ಅನುಭವ ಇರುವವರನ್ನು ಕೈಬಿಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದೇನೆ ಅಷ್ಟೇ’ ಎಂದರು.
‘ಸೋನಿಯಾ ಗಾಂಧಿ ತ್ಯಾಗಮಯಿ. ಆದ್ದರಿಂದ ಮನಮೋಹನ್ಸಿಂಗ್ ಪ್ರಧಾನಿಯಾದರು. ಈಶ್ವರಪ್ಪ ಪೆದ್ದ, ತಲೆ ಸರಿ ಇರದೆ, ಏನೇನೋ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಒಗ್ಗಟ್ಟಿದೆಯೇ? ಮುಖ್ಯಮಂತ್ರಿ ವಿರುದ್ದ ಸಚಿವ ಈಶ್ವರಪ್ಪ ರಾಜ್ಯಪಾಲರ ಬಳಿ ಹೋಗಿಲ್ಲವೇ? ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಸಹೋದರ ವೆಂಕಟೇಶ ತಂಗಡಗಿ, ವಿವಿಧ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಇದ್ದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಮುಗಿಸಿ,ಪಟ್ಟಣದಲ್ಲಿರುವ ಮಾಜಿ ಸಚಿವ ಶಿವರಾಜ ತಂಗಡಗಿ ನಿವಾಸದಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದರು.
ಸೋಮವಾರ ಬಸವಕಲ್ಯಾಣ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಅವರನ್ನು ನೋಡಲು ಕಾರ್ಯಕರ್ತರು ಹಿಂಡು, ಹಿಂಡಾಗಿ ಜಮಾವಣೆಗೊಂಡಿದ್ದರು. ಸಿದ್ದರಾಮಯ್ಯರನ್ನು ನೋಡುತ್ತಿದ್ದಂತೆಯೇ ಹೂಮಾಲೆ ಹಾಕಲು ಒಬ್ಬರ ಮೇಲೊಬ್ಬರು ಮುಗಿಬಿದ್ದಿದ್ದರು.