ಕೊಪ್ಪಳ: ನಗರದ ಈಶ್ವರ ಪಾರ್ಕ್ನಲ್ಲಿ ಹಿಂದೂ ಮಹಾಮಂಡಳಿ 11 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆ ಶನಿವಾರ ರಾತ್ರಿ ಭವ್ಯ ಮೆರವಣಿಗೆ ಮೂಲಕ ನಡೆಯಿತು.
ಪಾರ್ಕ್ನ ಮುಂಭಾಗದ ರಸ್ತೆಯುದ್ದಕ್ಕೂ ಜನ ಸೇರಿದ್ದರು. ರಾತ್ರಿ ಹೊತ್ತಾಗುತ್ತಿದ್ದಂತೆ ಜನ ಬರುವುದು ಹೆಚ್ಚಾಗುತ್ತಲೇ ಇತ್ತು. ಭಾನುವಾರ ಬೆಳಗಿನ ಜಾವದ ತನಕ ಅದ್ದೂರಿ ಮೆರವಣಿಗೆ ಮಾಡಲಾಯಿತು. ಡಿ.ಜೆ. ಅಬ್ಬರ ಹಾಗೂ ಬೆಳಕಿನ ಸಂಭ್ರಮಕ್ಕೆ ಯುವಜನತೆ ಹುಚ್ಚೆದ್ದು ಕುಣಿದರು.
ಮೊಳಗಿದ ಘೋಷಣೆ: ಸಂಸದ ಕರಡಿ ಸಂಗಣ್ಣ ಅವರು ಜನರ ನಡುವೆ ಬೆರೆತು ಭರ್ಜರಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದರು.
ಈ ವೇಳೆ ಅವರ ಹಿಂಬಾಲಕರು ಹಾಗೂ ಕಾರ್ಯಕರ್ತರು ‘ಮುಂದಿನ ಶಾಸಕ ಸಂಗಣ್ಣ ಕರಡಿ ಸಾಹೇಬ್ರಿಗೆ ಜಯವಾಗಲಿ, ಏನೇ ಬರಲಿ ಒಗ್ಗಟ್ಟು ಇರಲಿ’ ಎನ್ನುವ ಘೋಷಣೆಗಳನ್ನು ಕೂಗಿದರು. ಘೋಷಣೆ ನಿಲ್ಲಿಸುವಂತೆ ಸಂಸದರು ಸಂಜ್ಞೆ ಮಾಡಿದರೂ ಕೇಳದೆ ಕಾರ್ಯಕರ್ತರು ಘೋಷಣೆಯ ಧ್ವನಿ ಹೆಚ್ಚಿಸಿದರು.