ಕೊಪ್ಪಳ: ಹಿಂದಿ ದಿವಸ್ ಆಚರಣೆ ವಿರೋಧಿಸಿನಗರದಲ್ಲಿಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ ನಾರಾಯಣಗೌಡ ಬಣ) ಮತ್ತು ಜೆಡಿಎಸ್ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ಭವನ ಎದುರು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ ‘ಭಾರತ ಒಕ್ಕೂಟ ರಾಷ್ಟ್ರವಾಗಿದ್ದು, ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರವಾಗಿದೆ. ಒಂದೇ ಭಾಷೆಯನ್ನು ವೈಭವೀಕರಿಸುವ, ಒತ್ತಾಯವಾಗಿ ಹೇರುವ ಧೋರಣೆ ಖಂಡಿಸುತ್ತೇವೆ. ರಾಜ್ಯದಲ್ಲಿ ಕರ್ನಾಟಕವೇ ಸಾರ್ವಭೌಮ’ ಎಂದರು.
ಸಂಘಟನೆಯ ಪ್ರಮುಖರಾದ ಹನುಮಂತ ಬೆಸ್ತರ, ಅನಿಲಕುಮಾರ ಬಿಜ್ಜಳ, ನಿಂಗಪ್ಪ ಮೂಗಿನ, ಸಾವಿತ್ರಿ ದಳವಾಯಿ, ಆನಂದ ಬಂಡಿ, ನೀಲನಗೌಡ ಪಾಟೀಲ, ದೇಸಾಯಿ ಗೌಡರ, ಮಹ್ಮದ ರಫಿ ಸೇರಿದಂತೆ ಅನೇಕರು ಇದ್ದರು.
ಮನವಿ: ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಮಾತನಾಡಿ ‘ಹೊರಗಿನವರ ದಾಳಿಯ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ . ಈಗಲೂ ಸಹ ಈ ಆಚರಣೆಯಲ್ಲಿ ಕನ್ನಡಿಗರು ಪಾಲ್ಗೊಳ್ಳಬಾರದು’ ಎಂದರು.