ಕೊಪ್ಪಳ: ‘ಧಾರ್ಮಿಕ ಯಾತ್ರೆಗಳಿಂದ ಮನುಷ್ಯರಲ್ಲಿ ಸನ್ನಡತೆ ಹೆಚ್ಚುತ್ತದೆ’ ಎಂದು ಯುಸೂಫಿಯಾ ಮಸೀದಿಯ ಮೌಲಾನಾ ಮುಫ್ತಿನಜೀರ್ ಅಹ್ಮದ್ ಖಾದ್ರಿ ತಸ್ಕೀನಿ ಹೇಳಿದರು.
ಉಮ್ರಾ ಯಾತ್ರೆಯಿಂದ ಮರಳಿದ ನಗರದ ಯಾತ್ರಾರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ ‘ಆಧ್ಯಾತ್ಮಿಕ ಚಿಂತನೆ, ಅಲ್ಲಾಹ್ ಪ್ರಾರ್ಥನೆ ಹಾಗೂ ಮಾನವೀಯತೆಯಿಂದ ಜಗತ್ತಿನಲ್ಲಿ ಎಲ್ಲವನ್ನೂ ಗೆಲ್ಲಬಹುದು. ಎಲ್ಲರೂ ಧರ್ಮದ ಮಾರ್ಗದಲ್ಲಿ ಸಾಗುವುದು ಅವಶ್ಯ. ಉಮ್ರಾ ಯಾತ್ರೆ ಸಂದರ್ಭದಲ್ಲಿ ಕೊಪ್ಪಳದ ಎಲ್ಲ 18 ಯಾತ್ರಾರ್ಥಿಗಳು ನಮ್ಮ ರಾಜ್ಯ ನಮ್ಮ ದೇಶ, ಮಾನವ ಕುಲಕ್ಕೆ ಒಳ್ಳೆಯದು ಆಗಲಿ’ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಯಾತ್ರೆಯಿಂದ ಮರಳಿದ ಹಾಫೀಸ್ ಇಮ್ರಾನ್ ಸಾಬ್ ಆಲೀಂ, ದೌಲತ್ ಪಾಷಾ ದಫೇದಾರ್, ಅಂಜುಮನ್ ಸಮಿತಿಯ ಪಾಷಾಕಾಟನ್, ನಜೀರ್ ಅಹ್ಮದಸಾಬ್, ರಫೀಕ್ ಕೊತ್ವಾಲ್, ಅಬ್ದುಲ್ ಶುಕುರಸಾಬ್, ಅನ್ವರ ಕಾಟನ್, ಶೈಬಾಜ್ ದಫೇದಾರ್, ಮಹಮ್ಮದ್ ಹುಸೇನ್ ಜೊತೆ ಮಹಿಳಾ ಯಾತ್ರಾರ್ಥಿಗಳನ್ನೂ ಸನ್ಮಾನಿಸಲಾಯಿತು.
ಹಬೀಬ್ ಪಾಷಾ, ಜಾವೀದ್, ಮೆಹಬೂಬ ಪಾಷಾ, ಖಾಜಾ ಹುಸೇನ್ ಕುಷ್ಟಗಿ , ಶಬ್ಬೀರ್ ಹಾಗೂ ಕೊಪ್ಪಳದ ಮುಸ್ಲಿಂ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.