ಗಂಗಾವತಿ: ಮನುಷ್ಯನ ಮನಸ್ಸನ್ನು ಅರಳಿಸುವ ಶಕ್ತಿ ಇರುವುದು ಕೇವಲ ಸಾಹಿತ್ಯಕ್ಕೆ ಮಾತ್ರ. ಸಾಹಿತ್ಯ ಮನುಷ್ಯನ ಇಡೀ ಬದುಕಿನ ಚಿತ್ರಣವನ್ನೆ ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಜಿಎಚ್ಎನ್ ಕಾಲೇಜಿನಲ್ಲಿ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ಇತಿಹಾಸದ ಕುರಿತ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ ಸ್ಥಳಗಳಿದ್ದು, ಅವುಗಳ ಮಹತ್ವ, ಇತಿಹಾಸ, ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ಕೆಲಸ ಸಂಶೋಧಕರ ಮೇಲಿದೆ ಎಂದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಟಿ.ಎಂ.ಭಾಸ್ಕರ್ ಮಾತನಾಡಿ, ಕಾವ್ಯ ಮತ್ತು ಸಾಹಿತ್ಯಕ್ಕೆ ಸಮಾಜ ಕಟ್ಟುವ ಮತ್ತು ಪರಿವರ್ತಿಸುವ ಶಕ್ತಿ ಇದೆ. ಕವಿಯು ತನ್ನ ಬರವಣಿಗೆಯನ್ನು ಕಾವ್ಯದಿಂದ ಗುರುತಿಸಿಕೊಳ್ಳಬೇಕು ಎಂದರು.
ಪ್ರಾಧ್ಯಾಪಕ ಡಾ. ಜಾಜೀ ದೇವೇಂದ್ರಪ್ಪ ಮಾತನಾಡಿ, ಡಾ.ಶರಣಬಸಪ್ಪ ಕೋಲ್ಕಾರ್ ಈ ಭಾಗದ ಅತ್ಯುತ್ತಮ ಇತಿಹಾಸ ತಜ್ಞರು. ಇವರ ಮಾರ್ಗದರ್ಶನದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಇತಿಹಾಸ ವಿಭಾಗದಲ್ಲಿ ಪಿ ಎಚ್ ಡಿ ಮಾಡುತ್ತಿದ್ದಾರೆ ಎಂದರು.
ಪುಸ್ತಕ ಬಿಡುಗಡೆ: ಈ ವೇಳೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸಿ ಐಗೋಳ ಅವರ ’ಭಾವದ ಬೆಳದಿಂಗಳು‘, ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಅವರ ’ಕೊಪ್ಪಳ ಹಂಪಿ ಪ್ರದೇಶ ಚರಿತ್ರೆ ಹಾಗೂ ಪುರಾತತ್ವ‘, ಇತಿಹಾಸ ಸಂಶೋಧಕ ಡಾ. ರವಿ ಚವ್ಹಾಣ ಅವರ ’ಕುಷ್ಟಗಿ ತಾಲ್ಲೂಕಿನ ಶಾಸನಗಳು ಹಾಗೂ ಸ್ಮಾಕರಗಳು‘ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ, ಮಾಜಿ ಸಂಸದ ಶಿವರಾಮಗೌಡ, ಪುಸ್ತಕ ಪ್ರಾಧಿಕಾರದ ಸದಸ್ಯ ಅಶೋಕ ರಾಯ್ಕರ್, ತಿರುಳ್ಗನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಅಲ್ಲಮಪ್ರಭು ಬೆಟದೂರ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಹೇರೂರು, ಚನ್ನಬಸವಸ್ವಾಮಿ, ಶರಣೇಗೌಡ ಪಾಟೀಲ್ ಇದ್ದರು.