ಕೊಪ್ಪಳ: ‘ಕಮ್ಯುನಿಸ್ಟ್ ಪಕ್ಷಗಳು ಮಾತ್ರ ದೇಶದ ದುಡಿಯುವ ಜನರನ್ನು ರಕ್ಷಿಸುತ್ತವೆ. ಸಾಮಾಜಿಕ ವ್ಯವಸ್ಥೆ ಬದಲಾಯಿಸುತ್ತವೆ’ ಎಂದುಸಿಪಿಐಎಂಎಲ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ4ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ‘ಶ್ರಮ ಸಂಪತ್ತನ್ನು ಲೂಟಿ ಮಾಡುವ ಬಂಡವಾಳಶಾಹಿ ಪರ ಪಕ್ಷಗಳು ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿವೆ. ಹಾಗಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಕಮ್ಯುನಿಸ್ಟ್ ಚಳವಳಿ ಬಲಪಡಿಸಬೇಕಾಗಿದೆ’ ಎಂದರು.
‘ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾರ್ಪೊರೇಟ್ ಪರ ನೀತಿಗಳಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದೆ. ಬೆಲೆ ಏರಿಕೆ, ನಿರುದ್ಯೋಗ ಹಾಗೂ ಬಡತನ ಸಮಸ್ಯೆಯಿಂದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಆರ್ಎಸ್ಎಸ್ನ ಮೂಲ ಉದ್ದೇಶವೆಂದರೆ ಬ್ರಾಹ್ಮಣವಾದವನ್ನು ದೇಶದ ಬಹುಸಂಖ್ಯಾತರ ಮೇಲೆ ಹೇರುವುದಾಗಿದೆ’ ಎಂದರು.
ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್. ಪೂಜಾರ ಮಾತನಾಡಿ ‘ಅದಾನಿ, ಅಂಬಾನಿ ಕೆಲವು ಕಾರ್ಪೊರೇಟ್ ಕಂಪನಿಗಳ ಅಭಿವೃದ್ಧಿಯನ್ನು ದೇಶದ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. ಹಣದುಬ್ಬರ ಮಿತಿಮೀರಿ ಹೆಚ್ಚಾದರೂ ದೇಶದ ಆರ್ಥಿಕತೆ ಬ್ರಿಟನ್ ದೇಶವನ್ನು ಹಿಂದಿಕ್ಕಿದೆ ಎಂದು ಸುಳ್ಳು ಹೇಳಲಾಗುತ್ತದೆ’ ಎಂದು ಆರೋಪಿಸಿದರು.