ಗಂಗಾವತಿ: ಕೂಸಿನ ಮನೆಗೆ ಬರುವ ಮಕ್ಕಳನ್ನು ಮಹಿಳಾ ಆರೈಕೆದಾರರು ದೇವರಂತೆ ಕಾಣಬೇಕು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.
ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಬುಧವಾರ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಉದ್ಘಾಟಿಸಿ ಮಾತನಾಡಿದರು.
ಮಹಾನಗರಗಳಲ್ಲಿ ಮಾತ್ರ ಆಟದ ಮನೆಗಳು (ಪ್ಲೇ ಹೊಂ) ಇರುತ್ತವೆ. ಆದರೆ ಗ್ರಾಮೀಣ ಭಾಗದಲ್ಲಿ ಇರುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಬಡವರ ಮಕ್ಕಳನ್ನು ಆರೈಕೆ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗೆ ಒಂದರಂತೆ ಕೂಸಿನ ಮನೆ ಆರಂಭಿಸಿದೆ ಎಂದು ಹೇಳಿದರು.
ಈ ಕೂಸಿನ ಮನೆಯಲ್ಲಿ ಇಬ್ಬರು ಮಹಿಳಾ ಆರೈಕೆದಾರರು ಇರಲಿದ್ದು, ಬಡ ಕುಟುಂಬಗಳು ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋದರೆ ಮಹಿಳಾ ಆರೈಕೆದಾರರು ನೋಡಿಕೊಳ್ಳಲಿದ್ದಾರೆ. ಮಹಿಳೆಯರು ಇಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಮಕ್ಕಳು ಕೇಂದ್ರಗಳತ್ತ ಆಕರ್ಷಿತರಾಗಿ ಬರುವಂತೆ ಮಾಡಬೇಕು ಎಂದರು.
ತಾಪಂ ಇಒ ಲಕ್ಷ್ಮೀದೇವಿ ಮಾತನಾಡಿ, ಕೂಸಿನ ಮನೆಗೆ ಬರುವ ಚಿಣ್ಣರರ ವ್ಯಕ್ತಿತ್ವ ವಿಕಸನವಾಗುವ ನಿಟ್ಟಿನಲ್ಲಿ ಮಹಿಳಾ ಆರೈಕೆದಾರರು ಕಾರ್ಯ ನಿರ್ವಹಿಸಬೇಕು. ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಮಹಿಳಾಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಹಿರೇಬೆಣಕಲ್: ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬೆಣಕಲ್ ಗ್ರಾಮದಲ್ಲೂ ಬುಧವಾರ ಕೂಸಿನ ಮನೆ ಉದ್ಘಾಟಿಸಲಾಯಿತು.
ಚಿಕ್ಕಬೆಣಕಲ್ ಗ್ರಾ.ಪಂ ಅಧ್ಯಕ್ಷ ಶಿವಮೂರ್ತಿ, ಪಿಡಿಒ ಇಂದಿರಾ, ಕಾರ್ಯದರ್ಶಿ ಭೀಮಣ್ಣ, ಉಪಾಧ್ಯಕ್ಷ ಗುರಮ್ಮ ಲಿಂಗಪ್ಪ, ಸದಸ್ಯರಾದ ಬಸಮ್ಮ ವೀರೇಶ ಅಂಗಡಿ, ಶಿವಕುಮಾರ್ ನೀಡಿಶೇಷಿ, ಗಾದೆಪ್ಪ ಬೀಂಗೆರಿ, ಶ್ಯಾಮಿದ ಬೇಗಂ, ಹನುಮವ್ವ, ಯಮನೂರಪ್ಪ ಇದ್ದರು.
ವಡ್ಡರಹಟ್ಟಿ ಗ್ರಾಪಂ ಅಧ್ಯಕ್ಷ ಮಂಜುಳಾ ಶಿವಪ್ಪ ಹತ್ತಿಮರದ, ಗ್ರಾಪಂ ಸದಸ್ಯ ಮಹೇಶ ಆಡೂರು, ಪಂಪಣ್ಣ ಕೋರಿ, ಸುರೇಶ ಚಲವಾದಿ, ಕಾರ್ಯದರ್ಶಿ ಈಶಪ್ಪ ಸೇರಿ ಗ್ರಾಪಂ ಸಿಬ್ಬಂದಿ, ಮುಖಂಡರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಹಿಳಾ ಆರೈಕೆದಾರರು ಇದ್ದರು.
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಬುಧವಾರ ಶಾಸಕ ಜಿ.ಜನಾರ್ದನರೆಡ್ಡಿ ಕೂಸಿನ ಮನೆ ಉದ್ಘಾಟಿಸಿದರು. ತಾ.ಪಂ ಇಒ ಲಕ್ಷ್ಮೀದೇವಿ ಇದ್ದಾರೆ