ಕೊಪ್ಪಳ: ‘ಹಿಂದೂ, ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದು ಹಿಂದೂ ದೇವಾಲಯಗಳನ್ನು ಒಡೆದು ಹಾಕುತ್ತಿದ್ದಾರೆ. ಇವರಿಗೆ ಅಧಿಕಾರಕ್ಕಾಗಿ ಮಾತ್ರ ಹಿಂದುತ್ವ ಬೇಕು. ಬಿಜೆಪಿಗರು ಡೋಂಗಿ ಹಿಂದುಗಳು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ಶಿವರಾಜ ತಂಗಡಗಿ ಟೀಕಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಆಡಳಿತದ ವಿರುದ್ಧ ಕಾಂಗ್ರೆಸ್ ಜನಾಂದೋಲನ ರೂಪಿಸಲಿದೆ. ದೇಶ ಹಾಗೂ ರಾಜ್ಯದ ಹಿತ ಕಾಯಲು ಬದ್ಧವಾಗಿದ್ದು, ಜನ ಹಿತಕ್ಕಾಗಿ ಕಾಂಗ್ರೆಸ್ ಇನ್ನು ಮುಂದೆ ಎಲ್ಲ ಹಂತದಲ್ಲಿಯೂ ಪ್ರಬಲ ಹೋರಾಟ ನಡೆಸಲಿದೆ ಎಂದರು.
ದೇಶ ಕಟ್ಟುವ ಕೆಲಸ ಕಾಂಗ್ರೆಸ್ ಮಾಡಿದರೆ ದೇಶ ಒಡೆಯುವ ಮತ್ತು ಜನಸಾಮಾನ್ಯರ ಬದುಕು ಮತ್ತು ದೇಶದ ಸಂಪತ್ತು ಹಾಳಾಗಲು ಬಿಜೆಪಿಗರು ಹೊರಟಿದ್ದು, ಅವರ ನೀತಿಗಳಿಂದ ದೇಶ ಇಂದು ಅನೇಕ ಸಮಸ್ಯೆಗಳಿಗೆ ಬಲಿಯಾಗಿ ಬೆಲೆ ಏರಿಕೆ ಸೇರಿ ಇನ್ನಿತರ ಸಮಸ್ಯೆಗಳು ಉಲ್ಭಣಗೊಂಡಿವೆ.ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲುಬಿಜೆಪಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ದೇಶಕ್ಕಾಗಿ ಆಸ್ತಿ ಮಾಡಿದರೆ ಇವರು ದೇಶದ ಆಸ್ತಿಗಳನ್ನು ಖಾಸಗಿಯವರೆಗೆ ಮಾರಾಟ ಮಾಡುತ್ತಿದ್ದಾರೆ. ಯಾವಾಗ ಬೇಕಾದರೂ ಚುನಾವಣೆ ಬರಬಹುದು. ಮುಂದೆ ಯಡಿಯೂರಪ್ಪ ಅವರ ನಿರ್ಧಾರ ಗೊತ್ತಗಾಲಿದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೊಂದಾಣಿಕೆ ಇರುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ. ಇನ್ನು ಓವೈಸಿಯ ಎಐಎಂಐಎಂ ಇದು ಬಿಜೆಪಿ ಪ್ರಾಯೋಜಿತವಾಗಿದ್ದು, ಮುಸ್ಲಿಂ ಮತಗಳನ್ನು ಒಡೆಯುವ ತಂತ್ರವಾಗಿದೆ ಎಂದರು.
ಶಾಸಕ ರಾಘವೇಂದ್ರಹಿಟ್ನಾಳ ಮಾತನಾಡಿ, ಬಿಜೆಪಿ ಎಲ್ಲವನ್ನು ಖಾಸಗೀಕರಣ ಮಾಡುತ್ತಿ ರುವುದುಸಂವಿಧಾನ ವಿರೋಧಿ ನಡೆ. ಇದರ ಹಿಂದೆ ಮೀಸಲಾತಿ ತೆಗೆಯುವ ಹುನ್ನಾರ ಅಡಗಿದೆ. ಆದ್ದರಿಂದ ದೇಶದ ಜನರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್ ಪಾಶಾ, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ರಾಜ್ಯ ಮಹಿಳಾ ಕಾಂಗ್ರೆಸ್ ನ ಶೈಲಾಜಾ ಹಿರೇಮಠ, ಜಿಲ್ಲಾ ವಕ್ತಾರ ರವಿ ಕುರಕೋಡ, ಭರಮಪ್ಪ ಇದ್ದರು.