ಕುಕನೂರು: ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈರುಳ್ಳಿ ಬೆಳೆಗೆ ಟ್ವಿಸ್ಟರ್ ಶಿಲೀಂಧ್ರ ಬಾಧೆ (ಸುಳಿ ರೋಗ) ಕಾಡುತ್ತಿದ್ದು, ರೈತರಿಗೆ ಕಣ್ಣೀರು ತರಿಸಿದೆ.
ಮಾಳೆಕೊಪ್ಪ, ಯರೇಹಂಚಿನಾಳ, ಬಿನ್ನಾಳ, ಮಂಡಲಗಿರಿ, ಬನ್ನಿಕೊಪ್ಪ ಗ್ರಾಮಗಳಲ್ಲಿ ಬೆಳೆದ ಈರುಳ್ಳಿಗೆ ಬಾಧೆ ಕಾಣಿಸಿಕೊಂಡಿದೆ.
ಮಳೆ, ಮೋಡ ಕವಿದ ವಾತಾವರಣದಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗಕ್ಕೆ ತುತ್ತಾದ ಎಲೆಗಳು ಮತ್ತು ಕಾಂಡದ ಭಾಗವು ತಿರುಚಿಗೊಂಡು ನೆಲಕ್ಕೆ ಬೀಳುತ್ತದೆ.ರೋಗದ ತೀವ್ರತೆ ಹೆಚ್ಚಾದರೆ ಸುಟ್ಟಂತೆ ಆಗುತ್ತದೆ. ಬೆಳವಣಿಗೆಯೂ ಕುಂಠಿತವಾಗುತ್ತದೆ. ಗಾಳಿಯ ಮೂಲಕ ರೋಗವು ಹರಡುತ್ತದೆ. ತೇವಾಂಶವನ್ನು ಕಡಿಮೆ ಮಾಡುವುದಕ್ಕೆ ಮಣ್ಣಿನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು’ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಕೊರೊನಾ ಸಂಕಷ್ಟದ ನಡುವೆಯು ರಸಗೊಬ್ಬರ, ಬಿತ್ತನೆ ಬೀಜ, ಕೂಲಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ನಾಟಿ ಮಾಡಿದ ರೈತರು ಈಗ ಕಂಗಲಾಗಿದ್ದಾರೆ.
ಮಾಳಕೊಪ್ಪ ಗ್ರಾಮದ ರೈತ ಗುರುಸಿದ್ದಪ್ಪ ಚನ್ನಪ್ಪ ಜೀವಣ್ಣವರ್ ಮಾತನಾಡಿ, ‘3 ಎಕರೆ ಹೊಲದಲ್ಲಿ ₹75 ಸಾವಿರ ಖರ್ಚು ಮಾಡಿ ಈರುಳ್ಳಿ ನಾಟಿ ಮಾಡಿದ್ದೇನೆ. ಈಗ ಬೆಳೆ ಬೆಳವಣಿಗೆಯಾದ ಕೆಲವೇ ದಿನಗಳಲ್ಲಿ ನೆಲಕ್ಕೆ ಬೀಳುತ್ತಿದೆ. ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಅವರು ತಿಳಿಸಿದರು.
‘ರೋಗದ ನಿರ್ವಹಣೆಗೆ ಥಿಯೋಪಿನೈಟ್ ಮಿಥೈಲ್ ಒಂದು ಗ್ರಾಂ ಅನ್ನು ಪ್ರತಿ ಲೀಟರ್ನಲ್ಲಿ ಅಥವಾ ಹೆಕ್ಸಕೋನಾಜೋಲ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು. ಒಂದು ವಾರದ ನಂತರ ಎರಡು ಗ್ರಾಂಗಳಷ್ಟು ಬೋರಾನ್ ಜಿಂಕ್ ಮತ್ತು ಮ್ಯಾಂಗನೀಸ್ ಲಘು ಪೋಷಕಾಂಶವನ್ನು ಪ್ರತಿ ಲೀಟರ್ಗೆ ಬೆರಸಿ ಸಿಂಪಡಣೆ ಮಾಡಬೇಕು’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಲಿಂಗಣ್ಣವರ್ ತಿಳಿಸಿದ್ದಾರೆ.