ಯಲಬುರ್ಗಾ: ಮಕ್ಕಳ ಕಳ್ಳರೆಂದು ಸಂಶಯಗೊಂಡು ಊರೂರು ಅಲೆದು ಭಿಕ್ಷೆ ಬೇಡಿ ಹೊಟ್ಟೆಹೊರೆಯುವ ಬುಡಬುಡಿಕೆ ಸಮಾಜದ ಅಲೆಮಾರಿ ಯುವಕರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಘಟನೆ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಬೆಳಿಗ್ಗೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ತಮ್ಮದೇ ಆದ ದಾಟಿಯಲ್ಲಿ ಹಾಡುತ್ತಾ, ಕೈಯಲ್ಲಿರುವ ವಾದ್ಯವನ್ನು ನುಡಿಸುತ್ತಾ ಸಾಗುತ್ತ್ದ್ದಿದರು. ರೂಢಿ ಯಂತೆ ಹಳೆ ಸೀರೆ, ಬಟ್ಟೆ, ಮಿಕ್ಕಿದ ಅನ್ನ, ರೊಟ್ಟಿ ಕೇಳುವ ರೀತಿಯಲ್ಲಿ ಕೇಳುತ್ತಾ, ಭವಿಷ್ಯ ನುಡಿಯುತ್ತ ಮಕ್ಕಳ, ಪಾಲಕರು ಹಾಗೂ ಕುಟುಂಬದ ಸದಸ್ಯರನ್ನು ವಿಚಾರಿಸುತ್ತಾ ಭವಿಷ್ಯ ಹೇಳುವುದಾಗಿ ಪೀಡಿಸುತ್ತಿರುವುದಕ್ಕೆ ಆತಂಕಗೊಂಡ ಗ್ರಾಮದ ಕೆಲ ಮಹಿಳೆಯರು ಇವರೇ ಮಕ್ಕಳ ಕಳ್ಳರಿರಬಹುದು, ಬುಡುಬುಡಿಕೆ ವೇಷದಲ್ಲಿ ಗ್ರಾಮಕ್ಕೆ ಬಂದಿದ್ದಾರೆಂದು ಭಾವಿಸಿ ಗ್ರಾಮದ ಕೆಲ ಯುವಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಜಾಗೃತಗೊಂಡ ಅಲ್ಲಾಸಾಬ, ಮೈಬೂಸಾಬ ಸೇರಿದಂತೆ ಅನೇಕರು ಸೇರಿ ಭಿಕ್ಷೆ ಬೇಡುತ್ತಿದ್ದವರನ್ನು ಹಿಂದು ಮುಂದು ವಿಚಾರಿಸದೇ ಯಲಬುರ್ಗಾದ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ: ಸಹಾಯಕ ಪೊಲೀಸ್ ಅಧಿಕಾರಿ ಬೂದೆಪ್ಪ ವಶದಲ್ಲಿದ್ದ ಅಲೆಮಾರಿಗಳನ್ನು ವಿಚಾರಿಸಿದಾಗ ಬುಡಬುಡಿಕೆ ಸಮಾಜದವರೆಂದು ದೃಢಪಟ್ಟಿದೆ. ಅಲ್ಲದೇ ಅವರ ಬಳಿ ಇದ್ದ ಚುನಾವಣಾ ಗುರುತಿನ ಚೀಟಿಯನ್ನು ಪೊಲೀಸರಿಗೆ ತೋರಿಸಿದ್ದಾರೆ. ದಾವಣಗೇರಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕರೇಕಟ್ಟಿ ಗ್ರಾಮದ ದುರಗಪ್ಪ, ಹನಮಂತಪ್ಪ ಹಾಗೂ ಅಭಿ ಎಂಬುದು ಗೊತ್ತಾದ ಬಳಿಗೆ ಅವರು ಮಕ್ಕಳು ಕಳ್ಳರಲ್ಲ ಎಂದು ಪೊಲೀಸರು ನಿರ್ಧರಿಸಿ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆಂದು ಗೊತ್ತಾಗಿದೆ. ಕಂಡ ಕಂಡವರನ್ನೆಲ್ಲ ಮಕ್ಕಳು ಕಳ್ಳರೆಂದು ಭಾವಿಸಿ ಅವರನ್ನು ಥಳಿಸುವುದು, ಹಿಂಸೆ ನೀಡುವುದು, ಅವಮಾನಿಸುವುದು ಸರಿಯಲ್ಲ, ಸಂಶೆಯಾಸ್ಪದವಾಗಿ ತಿರುಗಾಡುವುದು, ಗ್ರಾಮಕ್ಕೆ ಅವರು ಅಪರಿಚಿತರೆಂದು ಗೊತ್ತಾದರೆ ಅವರನ್ನು ಮಾತನಾಡಿಸಿ ಗ್ರಾಮಕ್ಕೆ ಬಂದ ಕಾರಣ, ಉದ್ದೇಶ ಹಾಗೂ ಗ್ರಾಮದಲ್ಲಿನ ಯಾರೊಬ್ಬರ ಪರಿಚಯ ಇದ್ದ ಬಗ್ಗೆ ವಿಚಾರಿಸಬೇಕು. ಈ ಸಂದರ್ಭದಲ್ಲಿ ಅವರ ವರ್ತನೆ, ಮಾತುಗಳು ಸಂಶಯ ಬರುವ ರೀತಿಯಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದು ಚಿಕ್ಕಮ್ಯಾಗೇರಿ ಗ್ರಾಮಸ್ಥರಿಗೆ ಸಲಹೆ ನೀಡಿದರು. ಹಾಗೆಯೇ ಭಿಕ್ಷೆ ಬೇಡುತ್ತಾ ಊರೂರು ತಿರುಗುವ ಅಲೆಮಾರಿ ಸಮಾಜದವರು ಮುಂಚಿತವಾಗಿ ಆಯಾ ಪ್ರದೇಶದ ಹತ್ತಿರ ಇರುವ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಚಯ, ಸಂಪರ್ಕ ವಿಳಾಸ ಹಾಗೂ ಭಾವಚಿತ್ರವನ್ನು ಕೊಟ್ಟು ಹೋಗುವುದರಿಂದ ಇಂತಹ ಘಟನೆಗಳಿಗೆ ಅವಕಾಶವಿರುವುದಿಲ್ಲ ಎಂದು ಮಾರ್ಗದರ್ಶನ ಮಾಡಿ ಕಳುಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.