ಕಾರಟಗಿ: ಕೇಂದ್ರದ ಯುಪಿಎ ಸರ್ಕಾರದ ಕೊಡುಗೆಯಾಗಿರುವ ಸಂವಿಧಾನದ 371 (ಜೆ) ಕಲಂ ತಿದ್ದುಪಡಿಯಲ್ಲಿನ ಕೆಲ ಲೋಪಗಳನ್ನು ಶೀಘ್ರವೇ ಸರಿಪಡಿಸಿ, ಈ ಭಾಗದ ಜನರಿಗೆ ಸಮರ್ಪಕ ಸೌಲಭ್ಯಗಳು ತಲುಪುವಂತೆ ಮಾಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಘಟಕವು ಜಮ್ಮು– ಕಾಶ್ಮೀರ ಸಂತ್ರಸ್ತರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ನಿಧಿ ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಮ್ಮು ಕಾಶ್ಮೀರದ ಜನರು ಪ್ರವಾಹದಿಂದ ಸಾಕಷ್ಟು ಹಾನಿ ನೋವು ಅನುಭವಿಸಿದ್ದಾರೆ. ನಾನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ನೆರವು ನೀಡುತ್ತಿವೆ. ಮಾನವೀಯತೆಯಿಂದ, ಅಲ್ಲಿನ ಜನರು ಶೀಘ್ರವೇ ಚೇತರಿಸಿಕೊಳ್ಳಲಿ ಎಂಬ ಉದ್ದೇಶದಿಂದ ಪಕ್ಷ ಸೂಚಿಸಿದಂತೆ ಜಿಲ್ಲೆಯಲ್ಲಿ ನಿಧಿ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಿಂದ ಸುಮಾರು ₨ 3 ಲಕ್ಷ ಸಂಗ್ರಹಿಸುವ ಗುರಿ ಇದೆ ಎಂದು ಹೇಳಿದರು.
ಶಾಸಕ ಉಮೇಶ್ ಕತ್ತಿ ಅನುಭವಿಗಳು, ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಕುರಿತು ಧ್ವನ ಎತ್ತಿರುವುದು ಸಾಧು ಕ್ರಮವಲ್ಲ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಈರಮ್ಮ ಮುದಿಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಪ್ರಮುಖರಾದ ಕೆ. ಸಿದ್ಧನಗೌಡ, ಶಿವರೆಡ್ಡಿ ನಾಯಕ, ವಿಶ್ವನಾಥರಡ್ಡಿ ಹೊಸಮನಿ, ಹನುಮೇಶ್ ನಾಯಕ, ಬಿ. ಕಾಶಿವಿಶ್ವನಾಥ, ಅಂಭಣ್ಣ ನಾಯಕ, ಎಂ. ಸಂದೀಪಗೌಡ, ಶಿವರಡ್ಡಿ ನವಲಿ, ಜಂಭುನಾಥ ಇಟಗಿ, ಹನುಮಂತಪ್ಪ ಪನ್ನಾಪೂರ, ಹನುಮಂತಪ್ಪ ಬೇವಿನಾಳ, ದಾನನಗೌಡ, ಅಯ್ಯಪ್ಪ ಸಂಗಟಿ, ಸಿದ್ದಪ್ಪ ಬೇವಿನಾಳ, ಶರಣಪ್ಪ ಕಾಯಿಗಡ್ಡಿ, ಮರಿಸೂಗಪ್ಪ, ಸಿ. ಗದ್ದೆಪ್ಪ, ದಿವಟರ ಶರಣಪ್ಪ, ಪರಮೇಶ ಬೂದಗುಂಪಾ, ಉಮೇಶ್ ಭಂಗಿ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣಬಸವರಾಜ್, ಕಾರ್ಯದರ್ಶಿ ಅಯ್ಯಪ್ಪ ಉಪ್ಪಾರ್, ಬ್ಲಾಕ್ ಅಧ್ಯಕ್ಷರಾದ ಡಾ. ಕೆ. ಎನ್. ಪಾಟೀಲ್, ರೆಡ್ಡಿ ಶ್ರೀನಿವಾಸ ಇದ್ದರು.