ಮೈಸೂರು: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 258 ಮಂದಿ ಕೋವಿಡ್ ಕಾಯಿಲೆಯಿಂದ ಮುಕ್ತರಾಗಿದ್ದಾರೆ. ಮೃತಪಡುವವರ ಸಂಖ್ಯೆಯೂ 5ಕ್ಕೆ ಇಳಿಕೆಯಾಗಿದೆ. ಹೊಸದಾಗಿ 374 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ ರೋಗ ಲಕ್ಷಣಗಳುಳ್ಳ 231 ಮಂದಿ ಮಾತ್ರವೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿ 802 ಮಂದಿ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 221 ಮಂದಿ ದಾಖಲಾಗಿದ್ದಾರೆ. ಖಾಸಗಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ 85 ಮಂದಿ ಇದ್ದಾರೆ. ರೋಗ ಲಕ್ಷಣಗಳಿಲ್ಲದ 2,569 ಮಂದಿ ಮನೆಯಲ್ಲೇ ಇದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರೋಗ ಲಕ್ಷಣಗಳುಳ್ಳವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ.
ಮೃತಪಟ್ಟವರ ಪೈಕಿ ಮೂವರು ಮಹಿಳೆಯರು, ಇಬ್ಬರು ಪುರುಷರು ಸೇರಿದ್ದಾರೆ. ತೀವ್ರತರವಾದ ಉಸಿರಾಟದ ತೊಂದರೆಗೆ ಒಳಗಾಗಿದ್ದ 32 ವರ್ಷದ ಮಹಿಳೆಯು ಆಸ್ಪತ್ರೆಗೆ ದಾಖಲಾದ 3 ದಿನಗಳಲ್ಲೇ ಮೃತಪಟ್ಟಿದ್ದಾರೆ. 63 ವರ್ಷ ಮಹಿಳೆಯು 6 ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಮೃತಪಟ್ಟರು. 71 ವರ್ಷದ ಮಹಿಳೆಯು 13 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. 67 ಹಾಗೂ 50 ವರ್ಷದ ಪುರುಷ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದ ಎರಡೆ ದಿನಕ್ಕೆ ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 240ಕ್ಕೆ ಏರಿಕೆಯಾಗಿದೆ.
12 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಜಿಲ್ಲೆಯಲ್ಲಿ 49 ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಇದವರೆಗೂ ಜಿಲ್ಲೆಯಲ್ಲಿ 56,408 ಗಂಟಲು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 4,415 ಮಾದರಿಗಳು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರೆ, ಉಳಿದವೆಲ್ಲ ಸರ್ಕಾರಿ ಪ್ರಯೋಗಾಲಯದಲ್ಲೇ ಪರೀಕ್ಷೆಯಾಗಿದೆ.
ಕೋವಿಡ್ ಪರೀಕ್ಷಾ ಕೇಂದ್ರ ಉದ್ಘಾಟನೆ
ಸಿಎಫ್ಟಿಆರ್ಐ ಜಿಲ್ಲಾಡಳಿತದ ಸಹಯೋಗದೊಂದಿಗೆ ಇಲ್ಲಿನ ಬೃಂದಾವನ ಬಡಾವಣೆಯಲ್ಲಿರುವ ಪಂಚಕರ್ಮ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್ ಪರೀಕ್ಷಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು.
ಇಲ್ಲಿ ದಿನವೊಂದಕ್ಕೆ 200 ಗಂಟಲು ದ್ರವದ ಮಾದರಿಗಳನ್ನು ಪರೀಕ್ಷಿಸುವ ಸೌಲಭ್ಯ ಇದೆ. ಇದರಿಂದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿರುವ ಪ್ರಯೋಗಾಲಯದ ಮೇಲಿನ ಒತ್ತಡ ಕಡಿಮೆಯಾಗಲಿದೆ.