ಶ್ರೀರಂಗಪಟ್ಟಣ: ವ್ಯಕ್ತಿಯಯೊಬ್ಬ ತನ್ನ ಎರಡನೇ ಪತ್ನಿಯ ಜತೆ ಸೇರಿ ತನ್ನ ಮೊದಲ ಪತ್ನಿಯ ಮಗಳನ್ನು ಕೊಲೆ ಮಾಡಿರುವ ಪ್ರಕರಣ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ.
ಪಟ್ಟಣದ ಅಂಚೆಕೇರಿ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವ, ಶಿವಮೊಗ್ಗ ಟೌನ್ ಅಣ್ಣಾನಗರದ ಉಮರ್ ಫಾರೂಕ್ ಅಲಿಯಾಸ್ ಅಲಿ ಎಂಬಾತ ತನ್ನ ಎರಡನೇ ಪತ್ನಿ ಜಾಸ್ಮಿನ್ ಜತೆ ಸೇರಿ ತನ್ನ ಹಿರಿಯ ಪತ್ನಿಯ ಮಗಳು ಫಿರ್ದೋಸ್ (11) ಎಂಬಾಕೆಯನ್ನು ಬಡಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಾಲಕಿಯು ನೀರು ಕಾಯಿಸುವ ವೇಳೆ ವಿದ್ಯುತ್ ಶಾಕ್ನಿಂದ ಫಿರ್ದೋಸ್ ಮೃತಪಟ್ಟಿದ್ದಾಳೆ ಎಂದು ಹೇಳಿ ಪಟ್ಟಣದ ಸಮೀಪದ ಗಂಜಾಂನ ಸಯ್ಯದ್ ಮೊಹಿದೀನ್ ಅವರ ಮನೆಗೆ ಮಗಳ ಶವವನ್ನು ರಾತ್ರಿ ವೇಳೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡುವಂತೆ ಹೇಳಿದ್ದಾರೆ. ಮೃತ ಬಾಲಕಿಯ ಮೈ ಮೇಲೆ ಗಾಯದ ಗುರುತುಗಳು ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಉಮರ್ ಫಾರೂಕ್ ಮತ್ತು ಜಾಸ್ಮಿನ್ ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಶವವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಉಮರ್ ಫಾರೂಕ್ನ ಮೊದನೇ ಪತ್ನಿ ಐಷಾ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೊದಲನೇ ಪತ್ನಿಯ ಹಿರಿಯ ಮಗಳು ಫಿರ್ದೋಸ್ಳನ್ನು ಜತೆಯಲ್ಲಿ ಕರೆತಂದು ಇರಿಸಿಕೊಂಡಿದ್ದ. ಆರೇಳು ವರ್ಷಗಳಿಂದ ಈತ ಪಟ್ಟಣದಲ್ಲಿ ಆಟೊ ರಿಕ್ಷಾ ಓಡಿಸಿಕೊಂಡು ಜತೆಗೆ ಗುಜರಿ ಕೆಲಸ ಮಾಡುತ್ತಿದ್ದನು. ಎರಡನೇ ಪತ್ನಿ ಜಾಸ್ಮಿನ್ ಮತ್ತು ಹಿರಿಯ ಹೆಂಡತಿಯ ಮಗಳು ಫಿರ್ದೋಸ್ ಜತೆ ವಾಸವಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.