ಮಳವಳ್ಳಿ: ನಾಟಕ ಪ್ರದರ್ಶನ ನೀಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಕಲಾವಿದರೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಬಂಡೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮದ ಡಿ.ಎನ್.ನಂಜಯ್ಯ (41) ಮೃತಪಟ್ಟವರು. ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅವರು ಪ್ರದರ್ಶನ ನೀಡುತ್ತಿದ್ದರು.
ಬಂಡೂರು ಗ್ರಾಮದ ಬಸವನಗುಡಿಯಲ್ಲಿ ಶನಿವಾರ ‘ಶ್ರೀ ಕೃಷ್ಣ ಸಂಧಾನ’ ನಾಟಕದಲ್ಲಿ ನಂಜಯ್ಯ ಸೇರಿದಂತೆ ಸುಮಾರು 20 ಕಲಾವಿದರು ನಾಟಕ ಪ್ರದರ್ಶಿಸುತ್ತಿದ್ದರು. ನಾಟಕದಲ್ಲಿ ಸಾತ್ಯಕಿ, ಸೈಂಧವ ಪಾತ್ರ ಅಭಿನಯಿಸುತ್ತಿದ್ದಾಗಲೇ ಅವರು ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಕಲಾವಿದರು ಹಾಗೂ ಗ್ರಾಮಸ್ಥರು ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು.