ಪುರಾತನ ಕಟ್ಟೆಗೆ ಹೊಸ ರೂಪ

ಕೆರಗೋಡು: ಹೂಳು, ಕಸದಿಂದ ತುಂಬಿಹೋಗಿದ್ದ ಪುರಾತನ ಕಟ್ಟೆಯನ್ನು ಸ್ವಂತ ಹಣದಿಂದ ಯುವಕನೊಬ್ಬ ಸ್ನೇಹಿತರೊಂದಿಗೆ ಸೇರಿ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಮಂಡ್ಯ ತಾಲ್ಲೂಕು ಆಲಕೆರೆ ಗ್ರಾಮದ ತರಕಾರಿ ವ್ಯಾಪಾರಿ ಮಹೇಶ್ ಎಂಬುವವರು, ಜ್ಞಾನ ಜ್ಯೋತಿ ಬಸವಣ್ಣ ಮಿತ್ರಕೂಟ ರಚಿಸಿಕೊಂಡು ಹಲವು ಸಾಮಾಜಿಕ ಕಾರ್ಯಕ್ರಗಳನ್ನು ಮಾಡುತ್ತಿದ್ದಾರೆ.
ಡಾ. ಶಿವಕುಮಾರ ಸ್ವಾಮೀಜಿ ಜನ್ಮ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷ ರಕ್ತದಾನ ಶಿಬಿರ, ಅನ್ನದಾಸೋಹ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜನಮೆಚ್ಚುವ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ನರೇಗಾ ಯೋಜನೆಯಲ್ಲಿ ಕಟ್ಟೆ ಹೂಳೆತ್ತಿಸುವ ₹3 ಲಕ್ಷದ ಕಾಮಗಾರಿಗೆ ಅನುಮೋದನೆ ಸಿಕ್ಕರೂ ತಾಂತ್ರಿಕ ಕಾರಣಗಳಿಂದ ಅನುದಾನ ಮಂಜೂರಾಗಲಿಲ್ಲ. ಆದರೂ ನಿರಾಶರಾಗದೆ ಮಹೇಶ್ ಅವರು ಕಟ್ಟೆ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಿದ್ದಾರೆ.
ಸಾರ್ವಜನಿಕರು ಸಂಚರಿಸಲು ಭಯಪಡುವಷ್ಟು ಗಿಡಗಳು ಬೆಳೆದು ತೀರಾ ಚಿಕ್ಕದಾಗಿ ಕಾಣುತ್ತಿದ್ದ ಕಟ್ಟೆ ಇದೀಗ ಸ್ವಚ್ಛಗೊಂಡು
ನೀರು ತುಂಬಿ ಕಂಗೊಳಿಸುತ್ತಿದೆ.
‘ಮಹದೇಶ್ವರ ದೇವಸ್ಥಾನದ ಆವರಣ, ಕಟ್ಟೆ, ಬನ್ನಿಮಂಟಪ, ಕಲ್ಯಾಣಿ, ಹಳೇ ಗುಡಿ ಸುತ್ತಲಿನ ಪ್ರದೇಶದಲ್ಲಿ ಗಲೀಜು ಮಾಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ಪ್ರವಾಸಿ ಸ್ಥಳವನ್ನಾಗಿ ಮಾಡುವ ಆಲೋಚನೆ ಹೊಂದಿದ್ದೇವೆ’ ಎಂದು ಮಹೇಶ್ ಹೇಳುತ್ತಾರೆ.
‘ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹೇಶ್ ಕೆಲಸ ಶ್ಲಾಘನೀಯ. ಸ್ವಂತ ಹಣದಿಂದ ಇಷ್ಟೆಲ್ಲಾ ಅಭಿವೃದ್ಧಿ ಮಾಡಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸಹಕಾರ ನೀಡಲಿದ್ದಾರೆ’ ಎಂದು ಮುಖಂಡ ರಾಜಣ್ಣ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.