ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಬಿಬೆಟ್ಟ: ಮತ್ತೆ ಕಲ್ಲು ಗಣಿ, ಸ್ಫೋಟದ ಸದ್ದು

ಚಾಮರಾಜನಗರ ಕಲ್ಲು ಗಣಿ ನಿಷೇಧ ಪರಿಣಾಮ, ಅಕ್ರಮ ತಡೆಯಲು ಭೂವಿಜ್ಞಾನಿಗಳ ವೈಫಲ್ಯ
Last Updated 23 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಚಾಮರಾಜನಗರ ಜಿಲ್ಲೆಯಲ್ಲಿ ಕಲ್ಲು ಗಣಿ ನಿಷೇಧವಾದ ನಂತರ ಮಂಡ್ಯ ಜಿಲ್ಲೆಯ ಕಲ್ಲು ಗಣಿಗಳಿಗೆ ವಿಪರೀತ ಬೇಡಿಕೆ ಬಂದಿದೆ. ಬೇಬಿಬೆಟ್ಟದ ಆಸುಪಾಸಿನಲ್ಲಿ ನಿಷೇಧದ ನಡುವೆಯೂ ಮತ್ತೆ ಕಲ್ಲು ಸ್ಫೋಟ, ಗಣಿ ಸದ್ದು ಆರಂಭವಾಗಿದ್ದು ಗಣಿ ಮತ್ತು ಭೂವಿಜ್ಞಾನಿ ಇಲಾಖೆ ಅಧಿಕಾರಿಗಳು ಅಕ್ರಮ ತಡೆಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿ ಕ್ವಾರಿ ಕುಸಿತದ ನಂತರ ಅಲ್ಲಿ ಗಣಿ ಚಟುವಟಿಕೆಯನ್ನು ನಿಷೇಧಿಸಲಾಗಿದೆ. ಮೈಸೂರು ಭಾಗದಲ್ಲಿ ಜಲ್ಲಿ, ಬೋರ್ಡರ್ಸ್‌, ಚಪ್ಪಡಿಗೆ ತೀವ್ರ ಬೇಡಿಕೆ ಉಂಟಾಗಿರುವುದು ಜಿಲ್ಲೆಯ ಗಣಿ ಮಾಲೀಕರಿಗೆ ವರವಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ, ಮುಂಡುಗದೊರೆ ಭಾಗದಲ್ಲಿ ಹಗಲು– ರಾತ್ರಿ ಗಣಿ ಚಟುವಟಿಕೆ ನಡೆಯುತ್ತಿದ್ದು ಸ್ಥಳೀಯರು ಕಿರಿಕರಿ ಅನುಭವಿಸುತ್ತಿದ್ದಾರೆ.

ಚನ್ನನಕೆರೆ ಗಣಿ ಪ್ರದೇಶಕ್ಕೆ ಜನರು ರಾತ್ರೋರಾತ್ರಿ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ವಿರೋಧಕ್ಕೆ ಜಗ್ಗದ ಗಣಿ ಮಾಲೀಕರು ನಿರಂತರವಾಗಿ ಚಟವಟಿಕೆ ಮುಂದುವರಿಸಿದ್ಧಾರೆ. ‘ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಗಣಿ ಮಾಲೀಕರ ಆಮಿಷಕ್ಕೆ ಬಲಿಯಾಗಿ ಕಣ್ಣುಮುಚ್ಚಿ ಕುಳಿತಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.

ಬೇಬಿಬೆಟ್ಟ ಸೇರಿದಂತೆ ಕೆಆರ್‌ಎಸ್‌ ಆಸುಪಾಸಿನಲ್ಲಿ ಬರುವ ಗಣಿ ಕಂಪನಿಗಳಿಗೆ ಕ್ವಾರಿ ಅನುಮತಿ ಮುಗಿದಿದ್ದು ಅವು ಗಣಿ ಚಟುವಟಿಕೆ ನಡೆಸುವಂತಿಲ್ಲ. ಆದರೆ ಗಣಿ ಮಾಲೀಕರು ಗಣಿ ಇಲಾಖೆ ಅಧಿಕಾರಿಗಳಿಗೆ ಪ್ರಭಾವ ಬೀರಿ ರಾತ್ರಿ ವೇಳೆ ಕದ್ದು ಮುಚ್ಚಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಸದ್ಯ ಬೇಬಿಬೆಟ್ಟದಲ್ಲಿ ಕೈಕುಳಿ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಸ್ಫೋಟ, ಯಂತ್ರೋಪಕರಣ ಬಳಸಿ ಗಣಿಗಾರಿಕೆ ನಡೆಸುವಂತಿಲ್ಲ. ಆದರೆ ಚಾಮರಾಜನಗರದ ಜಿಲ್ಲೆಯಲ್ಲಿ ಗಣಿಗಾರಿಕೆ ನಿಷೇಧದ ನಂತರ ಕಲ್ಲಿಗೆ ಬೇಡಿಕೆ ತೀವ್ರವಾಗಿದ್ದು ಗಣಿ ಮಾಲೀಕರು ನಿಷೇಧ ಆದೇಶವನ್ನು ಗಾಳಿಗೆ ತೂರಿ ಚಟುವಟಿಕೆ ನಡೆಸುತ್ತಿದ್ದಾರೆ.

‘ಸಂಜೆ 6 ಗಂಟೆಯಿಂದ ಮಾರನೇ ದಿನ ನಸುಕಿನ 5 ಗಂಟೆಯವರೆಗೆ ನೂರಾರು ಲಾರಿಗಳು ಬೇಬಿಬೆಟ್ಟದಿಂದ ಮೈಸೂರು ಕಡೆಗೆ ಚಲಿಸುತ್ತಿವೆ. ಕೆಆರ್‌ಎಸ್‌ ಬಳಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ನಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ, ಸಿಸಿಟಿವಿ ಕ್ಯಾಮೆರಾ ಹಾಳು ಮಾಡಲಾಗಿದೆ. ಗಣಿ ಮಾಲೀಕರ ಜೊತೆ ಪೊಲೀಸರು ಶಾಮೀಲಾಗಿದ್ದು ತಪಾಸಣೆ ಮಾಡದೇ ಲಾರಿ ಬಿಡುತ್ತಿದ್ದಾರೆ’ ಎಂದು ಕೆಆರ್‌ಎಸ್‌ ನಿವಾಸಿ ರಾಮೇಗೌಡ ಹೇಳಿದರು.

ಮತ್ತೆ ಸ್ಫೋಟ: ಬೇಬಿಬೆಟ್ಟದಲ್ಲಿ ನಿಷೇಧದ ನಡುವೆಯೂ ಮತ್ತೆ ಕಲ್ಲು ಸ್ಫೋಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸೋಮವಾರ ಮತ್ತು ಮಂಗಳವಾರ ಸಂಜೆ ಕಲ್ಲು ಸ್ಫೋಟ ನಡೆಸಲಾಗಿದ್ದು ಜನರು ಭಯಪೀಡಿತರಾಗಿದ್ದಾರೆ. ಈ ಕುರಿತು ಗಣಿ ಇಲಾಖೆಗೆ ಸ್ಥಳೀಯರು ಕರೆ ಮಾಡಿ ತಿಳಿಸಿದ್ದಾರೆ. ಆದರೆ ಭೂವಿಜ್ಞಾನಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸದಿರುವುದು ಅನುಮಾನಕ್ಕೆ ಕಾರಣವಾಗಿದೆ.

‘ಮೂರು ತಿಂಗಳಿಂದೀಚೆಗೆ ಬೇಬಿಬೆಟ್ಟದಲ್ಲಿ ಸ್ಫೋಟ ನಡೆದಿರಲಿಲ್ಲ. ಆದರೆ ಸೋಮವಾರದಿಂದ ಮತ್ತೆ ಸ್ಫೋಟ ಆರಂಭಿಸಿದ್ದಾರೆ. ಗಣಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟ ತಡೆಯಬೇಕು’ ಎಂದು ಬೇಬಿ ಗ್ರಾಮದ ಕುಮಾರ್‌ ಒತ್ತಾಯಿಸಿದರು.

ಉಡಾಫೆ ಉತ್ತರ: ಅಕ್ರಮ ಸ್ಫೋಟದ ಕುರಿತು ಪ್ರತಿಕ್ರಿಯೆ ಪಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪದ್ಮಜಾ ಅವರಿಗೆ ಹಲವು ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ‘ಪದ್ಮಜಾ ಕರೆ ಸ್ವೀಕರಿಸುತ್ತಿಲ್ಲ’ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಜಿಲ್ಲಾಧಿಕಾರಿಗಳ ಸೂಚನೆಯ ನಂತರ ಕರೆ ಸ್ವೀಕರಿಸಿದ ಪದ್ಮಜಾ ‘ಬೇಬಿಬೆಟ್ಟದಲ್ಲಿ ಸ್ಫೋಟ ನಡೆದಿಲ್ಲ, ನಡೆದಿದ್ದರೂ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಉಡಾಫೆ ಉತ್ತರ ಕೊಟ್ಟು ಕರೆ ಸ್ಥಗಿತಗೊಳಿಸಿದರು.

‘ಅಕ್ರಮ ಗಣಿಗಾರಿಕೆ ತಡೆಯುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

******

ಚೆಕ್‌ಪೋಸ್ಟ್‌ನಲ್ಲಿ ಗೃಹರಕ್ಷಕ ಸಿಬ್ಬಂದಿ

ಕೆಆರ್‌ಎಸ್‌ ಬಳಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಹಾಗೂ ಗಣಿ ಇಲಾಖೆ ಸಿಬ್ಬಂದಿ ಇರಬೇಕು. ಆದರೆ ಕಲ್ಲು ಸಾಗಿಸುವ ಲಾರಿಗಳ ತಪಾಸಣೆಗೆ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. ಗೃಹರಕ್ಷಕ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿರುವ ಗಣಿ ಮಾಲೀಕರು, ಲಾರಿ ಚಾಲಕರು ತಪಾಸಣೆ ಇಲ್ಲದೆಯೇ ಕಲ್ಲು ಸಾಗಿಸುತ್ತಿದ್ದಾರೆ. ಬಹುತೇಕ ಟ್ರಕ್‌, ಲಾರಿಗಳು ಯಾವುದೇ ಪರವಾನಗಿ ಇಲ್ಲದೆಯೇ ಕಲ್ಲು ಸಾಗಣೆ ಮಾಡುತ್ತಿವೆ.

‘ಪ್ರತಿ ಲಾರಿಯಲ್ಲೂ ಅಗತ್ಯಕ್ಕಿಂತಲೂ ಹೆಚ್ಚು ಕಲ್ಲು ತುಂಬಿ ಸಾಗಿಸಲಾಗುತ್ತಿದೆ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಧನ ನಷ್ಟ ಉಂಟಾಗುತ್ತಿದೆ. ಗಣಿ ಮಾಲೀಕರೊಂದಿಗೆ ಶಾಮೀಲಾಗಿರುವ ಪೊಲೀಸರು, ಗಣಿ ಇಲಾಖೆ ಅಧಿಕಾರಿಗಳು ತಪಾಸಣೆ ಇಲ್ಲದೇ ಲಾರಿಗಳನ್ನು ಬಿಡುತ್ತಿದ್ದಾರೆ’ ಎಂದು ಕಟ್ಟೇರಿ ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT