ಕೆ.ಆರ್.ಪೇಟೆ: ‘ರಾಜ್ಯದ ರೈತರ ಹಿತಾಸಕ್ತಿ ಮತ್ತು ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇನೆ. ವೈಯಕ್ತಿಕ ಸ್ಥಾನಮಾನ ಮತ್ತು ಪ್ರತಿಷ್ಟೆಗಾಗಿ ಅಲ್ಲ’ ಎಂದು ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಪಡಿಸಿದರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬೃಹತ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ರಾಜ್ಯದ 200 ರೈತರು ಸಾಲದಿಂದ ಸತ್ತಾಗ ಅವರ ಮನೆಗೆ ಹೋಗಿ ಕೈಲಾದ ಸೇವೆಯನ್ನು ಮಾಡಿ ತಾಯಂದಿರ ಕಣ್ಣೀರ ಒರೆಸಿದವನೆಂಬ ಹೆಮ್ಮೆ ನನಗಿದೆ. ನಾನು ಎಂದೂ ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡುವವನಲ್ಲ. ತಾಯಿ ಎಂದೇ ಸಂಬೋಧಿಸುತ್ತೇನೆ. ನನ್ನ ಮಾತನ್ನು ತಿರುಚಿ ಕಾಂಗ್ರೆಸ್ನವರು ಕುಮಾರಸ್ವಾಮಿ ‘ಗೋ ಬ್ಯಾಕ್’ ಚಳುವಳಿ ಮಾಡುತಿದ್ದಾರೆ’ ಎಂದರು.
‘ವಿಶ್ವೇಶ್ವರಯ್ಯ ಕಾಲುವೆ ಆಧುನೀಕರಣ ಕಾಮಗಾರಿ ಕಳಪೆಯಾಗಿ ನಡೆಯುತಿದ್ದು, ಚುನಾವಣೆಗೆ ನಿಂತ ಕಾಂಗ್ರೆಸ್ ಅಭ್ಯರ್ಥಿಯೇ ಗುತ್ತಿಗೆದಾರರಾಗಿದ್ದಾರೆ’ ಎಂದು ಕಿಡಿಕಾರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ನೆನಗುದಿಗೆ ಬಿದ್ದಿದೆ. ಗ್ಯಾರಂಟಿ ನೆಪದಲ್ಲಿ ಜನರಿಂದ ತೆರಿಗೆಗಳನ್ನು ದುಪ್ಪಟ್ಟು ಮಾಡಿ ವಸೂಲಿ ಮಾಡಲಾಗುತ್ತಿದೆ. ಮಂಡ್ಯದಲ್ಲಿ ಹಣವಂತರು ಮತ್ತು ಹೃದಯವಂತರ ನಡುವೆ ಸ್ಪರ್ಧೆ ಇದ್ದು ಹಣ ಇರುವವರನ್ನು ತಿರಸ್ಕರಿಸಿ ಹೃದಯವಂತರಾದ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ಮಾಜಿ ಸಚಿವ ನಾರಾಯಣಗೌಡ ಮಾತನಾಡಿ, ‘ತಾಲ್ಲೂಕಿನ ಅಭಿವೃದ್ದಿಗಾಗಿ ನಾನು ಬಿಜೆಪಿ ಪಕ್ಷಕ್ಕೆ ಸೇರಿದ್ದೆನೆ ವಿನಹ ಬೇರೇ ಕಾರಣಕ್ಕಲ್ಲ. ಜೆಡಿಎಸ್ ಅಭ್ಯರ್ಥಿ ಮಂಜು ಗೆದ್ದಾಗ ಸಂತೋಷದಿಂದ ಜನರಿಗೆ 50 ಕೆ.ಜಿ ಸ್ವೀಟ್ ಹಂಚಿಸಿದ್ದೆ’ ನೆನಪಿಸಿಕೊಂಡರು.