ಮಂಡ್ಯ: ನಗರದ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳು ನೃತ್ಯ ಮಾಡುತ್ತಾ, ಹಾಡು ಹೇಳುತ್ತಾ ಲವಲವಿಕೆಯಿಂದ ಕಾಲ ಕಳೆಯುತ್ತಿದ್ದಾರೆ. ಆ ಮೂಲಕ ಕೋವಿಡ್ ಭೀತಿ ತೊರೆಯುತ್ತಿದ್ದಾರೆ.
‘ಕುಲದಲ್ಲಿ ಕೀಳಾವುದೋ ಹುಚ್ಚಪ್ಪ’ ಗೀತೆಗೆ ರೋಗಿಗಳು ಹೆಜ್ಜೆ ಇಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೋಗಿಗಳ ನೃತ್ಯಕ್ಕೆ ವಾರ್ಡ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಪ್ರೋತ್ಸಾಹ ಮಾಡಿದ್ದಾರೆ.
ಕೆಲವರು ಸೆಲ್ಫಿ ವಿಡಿಯೊ ಮಾಡಿ, ಕೋವಿಡ್ ಆಸ್ಪತ್ರೆಯ ರೋಗಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ. ಊಟ ತಿಂಡಿಯಲ್ಲಿ ನಮಗೆ ಯಾವುದೇ ಕೊರತೆಯಾಗಿಲ್ಲ. ಕೋವಿಡ್ ಬಂದರೆ ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
‘ದಾಖಲಾಗಿ ವಾರ ಕಳೆದ ನಂತರ ರೋಗಿಗಳನ್ನು ಪ್ರತ್ಯೇಕ ಮಾಡಲಾಗುತ್ತದೆ. ವಾರದೊಳಗಿನ ರೋಗಿಗಳಷ್ಟೇ ನೃತ್ಯ ಮಾಡಿದ್ದಾರೆ. ಅವರ ಖುಷಿಗೆ ನಾವು ಅಡ್ಡಿಪಡಿಸಿಲ್ಲ. ಆದರೂ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದ್ದೇವೆ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಹೇಳಿದರು.