ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಎಸ್ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಗ್ರಾಮದ ಬಜಾರ್ ಲೈನ್ ಬಡಾವಣೆಯ ಗಂಗಾರಾಂ ಅವರ ಪತ್ನಿ ಲಕ್ಷ್ಮಿ (30), ಅವರ ಮಕ್ಕಳಾದ ರಾಜು (10), ಕೋಮಲ್ (7), ಕುನಾಲ್ (4) ಮತ್ತು ಲಕ್ಷ್ಮಿ ಅವರ ಸೋದರ ಗಣೇಶ್ ಅವರ ಮಗ ಗೋವಿಂದ (8) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ಸಾಮೂಹಿಕ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಲಕ್ಷ್ಮಿ ಅವರ ಪತಿ ಗಂಗಾರಾಂ ವ್ಯಾಪಾರ ನಿಮಿತ್ತ ಹೊರ ಹೋಗಿದ್ದಾಗ ಈ ಕೃತ್ಯ ನಡೆದಿದೆ.
ಸ್ಥಳಕ್ಕೆ ದಕ್ಷಿಣ ವಲಯ ಐ.ಜಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.
'ಘಟನೆಗೆ ಕಾರಣ ಇನ್ನೂ ನಿಗೂಢವಾಗಿದೆ. ಮೃತದೇಹಗಳ ಮೇಲೆ ಗಾಯಗಳಾಗಿರುವ ಕಾರಣ ಕೊಲೆ ಎಂದು ಶಂಕಿಸಲಾಗಿದೆ. ಎಲ್ಲಾ ದಿಕ್ಕುಗಳಿಂದಲೂ ತನಿಖೆ ಮಾಡಲಾಗುತ್ತಿದೆ' ಎಂದು ಎಸ್ಪಿ ಎನ್.ಯತೀಶ್ ತಿಳಿಸಿದರು.