ಮಳವಳ್ಳಿ: ತಾಲ್ಲೂಕಿನ ಶಿಂಷಾ ವಲಯದ ಕಾವೇರಿ ವನ್ಯಜೀವಿಧಾಮಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ ಗುರುವಾರ ರಾತ್ರಿ ಬೆಂಕಿ ತಗುಲಿ 8 ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿದೆ.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಜ್ವಾಲೆ ತೀವ್ರವಾಗಿ ವ್ಯಾಪ್ತಿಸುತ್ತಿದ್ದಂತೆ ಸ್ಥಳಕ್ಕೆ ಬಂದಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದೊಂದಿಗೆ ರಾತ್ರಿ 9.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.
ಆದರೆ, ಆ ವೇಳೆಗಾಗಲೇ ಎಂಟು ಎಕರೆ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ನೂರಾರು ಮರಗಳು, ಕುರುಚಲು ಗಿಡಗಳು ಬೆಂಕಿಗೆ ಆಹುತಿಯಾಗಿದ್ದವು. ವನ್ಯಜೀವಿಧಾಮದಲ್ಲಿನ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಬೆಂಕಿಯು ಹನೂರು, ಸಾತನೂರು ಭಾಗಕ್ಕೆ ವ್ಯಾಪಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡರು. ಕಾರ್ಯಾಚರಣೆಯಲ್ಲಿ ಹಲಗೂರು ವಲಯದ ಆರ್ಎಫ್ಒ ಕಿರಣ್ ಕುಮಾರ್, ಡಿಆರ್ಎಫ್ಒ ಪ್ರವೀಣ್ ಭಾಗವಹಿಸಿದ್ದರು.