ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಆಗಮಿಸಿದ್ದ ಶಾಸಕರ ಎದುರು ರಸಾಯನಶಾಸ್ತ್ರದ ಉಪನ್ಯಾಸಕ ವಿ.ಕೆ.ಶಿವಾನಂದ ಅವರು ಅಳಲು ತೋಡಿಕೊಂಡರು. ‘ಕಾಲೇಜಿನಲ್ಲಿ ಪ್ರಾಂಶುಪಾಲ ಪಾಪಯ್ಯನವರು ಜಾತೀಯತೆ ಮಾಡುತ್ತಿದ್ದು, ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಉಪನ್ಯಾಸಕರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರೂ ಸುಮ್ಮನೆ ನಮ್ಮನ್ನು ಹಿಯ್ಯಾಳಿಸುತ್ತಾರೆ. ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರಿಗೆ, ಸಿಬ್ಬಂದಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕಾಲೇಜಿನ ವಾತಾವರಣ ಹದಗೆಟ್ಟಿದೆ. ಸಮಸ್ಯೆಯನ್ನು ಬಗೆಹರಿಸಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಮ್ಮಣ್ಣ, ‘ಕಾರ್ಯಕ್ರಮ ಮುಗಿದ ಬಳಿಕ ಈ ಬಗ್ಗೆ ಮಾತನಾಡೋಣ. ಯಾರು ಯಾವ ಜಾತಿ ವಿರುದ್ಧವೂ ಮಾತನಾಡಬಾರದು. ಕಾಲೇಜಿನಲ್ಲಿಯೇ ಈ ರೀತಿಯಾದರೆ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ? ಎಂದರು.