ಮಂಡ್ಯ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ವಿವಿಧೆಡೆ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ನಾಗಮಂಗಲ ತಾಲ್ಲೂಕು ಹೊನ್ನಾವರದ ಹಿರಿಕೆರೆ, ಬಿಂಡಿಗನವಿಲೆ ಕೆರೆ ತುಂಬಿ ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದೆ.
ಮಂಗಳವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬಿಂಡಿಗನವಿಲೆ ಕೆರೆ ತುಂಬಿ ನೀರು ಹೊರಗೆ ಹರಿದು ಹೋಗುತ್ತಿದೆ. ಹೊನ್ನಾವರದ ಹಿರಿಕೆರೆ, ಕಲ್ಕೆರೆ, ಹುಲಿಕೆರೆ, ಚನ್ನಾಪುರ ಕೆರೆಗಳೂ ತುಂಬಿವೆ. ದುಮ್ಮಸಂದ್ರ ಅಣೆಕಟ್ಟೆ ಮೇಲೆ ನೀರು ಹರಿಯುತ್ತಿದ್ದು ಪ್ರವಾಸಿ ತಾಣದಂತಹ ದೃಶ್ಯ ವೈಭವ ಸೃಷ್ಟಿಯಾಗಿದೆ.
ಒಡೆದ ಕಾಲುವೆ: ನಾಗಮಂಗಲ ತಾಲ್ಲೂಕು ಕಲ್ಲಿನಾಥಪುರದ ಬಳಿ ಹೇಮಾವತಿ ನಾಲೆ ಒಡೆದು ಅಪಾರ ಪ್ರಮಾಣದ ನೀರು ಕೆರೆಯಂಚಿನ ತೆಂಗಿನ ತೋಟ, ಹೊಲಗಳಿಗೆ ನುಗ್ಗಿದೆ. ಕಳೆದ ವರ್ಷವೂ ಈ ನಾಲೆ ಒಡೆದು ಹೋಗಿತ್ತು, ನೀರಾವರಿ ಇಲಾಖೆ ಅಧಿಕಾರಿಗಳು ಮರಳಿನ ಚೀಲ ಹಾಕಿ ತೇಪೆ ಹಾಕುವ ಕೆಲಸ ಮಾಡಿದ್ದರು. ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ಈ ವರ್ಷ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಾಲೆ ಒಡೆದಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಕೆ.ಆರ್.ಪೇಟೆ ತಾಲ್ಲೂಕು ಮದ್ದಿಕನಾಚೇನಹಳ್ಳಿಯಲ್ಲಿ ಶೇಷಣ್ಣ ಅವರ ಮನೆ ಭಾಗಶಃ ಕುಸಿದಿದೆ, ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.